ಕರ್ನಾಟಕ ಬಜೆಟ್ 2020: ಬಿಎಸ್‌ವೈ ಬಜೆಟ್ ಹೈಲೈಟ್ಸ್

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ಪರಿಷ್ಕೃತ ಬಜೆಟ್ ಮಂಡನೆ ಮಾಡಿದರು. ಸಿಎಂ ಯಡಿಯೂರಪ್ಪ ಅವರು 7ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಈ ಹಿಂದೆ 2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 2 ಬಾರಿ ಬಜೆಟ್ ಮಂಡಿಸಿದ್ದರು. ಆ ಬಳಿಕ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದ ಅವಧಿಯಲ್ಲಿ 4 ಬಾರಿ ಬಜೆಟ್ ಮಂಡನೆ ಮಾಡಿದ್ದರು.

ರಾಜ್ಯದ ಜನತೆಗೆ ಧನ್ಯವಾದ ಸಮರ್ಪಿಸಿ ಬಜೆಟ್ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದು ಸರ್ವರಿಗೂ ಸಮಬಾಳು, ಎಲ್ಲರನ್ನೂ ಒಳಗೊಂಡ ಬಜೆಟ್. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೃಷಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಅಲ್ಲದೆ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ರಾಜ್ಯದ ತೆರಿಗೆ ಪಾಲು ಕಡಿಮೆ:
2019-20ನೇ ಹಣಕಾಸು ವರ್ಷದಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು 1,993 ಕೋಟಿ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ ಸಿಎಂ ಬಿಎಸ್‌ವೈ, ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಕಡಿಮೆಯಾಗಿರುವುದರಿಂದ ರಾಜ್ಯದ ಅನುದಾನವೂ ಕಡಿಮೆಯಾಗಿದೆ. ರೂ.8883 ಕೋಟಿ ಅನುದಾನ ಕಡಿಮೆಯಾಗಿದೆ ಎಂದರು.

ಮೀನುಗಾರರಿಗೆ ಬಜೆಟ್ ಕೊಡುಗೆ:
* ಮೀನುಗಾರರ ಅನುಕೂಲಕ್ಕಾಗಿ ಮತ್ಸ ವಿಕಾಸ ಯೋಜನೆ.
* ಮಹಿಳಾ ಮೀನುಗಾರ ಸಬಲೀಕರಣ ಯೋಜನೆ ಮೂಲಕ ದ್ವಿಚಕ್ರ ವಾಹನ ವಿತರಣೆ.
* ಉಡುಪಿ ಜಿಲ್ಲೆಯಲ್ಲಿ ಬಂದರು ಅಭಿವೃದ್ಧಿ.
* ಮೀನುಗಾರಿಗೆ ಸದೃಢಗೊಳಿಸಲು ಕ್ರಮ.

– ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ 25% ಮೀಸಲಾತಿ.
– ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಔಷಧಿ ತಯಾರಿಕಾ ಘಟಕ ಸ್ಥಾಪನೆ.
– ವಸತಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ.
– ಶಿಕ್ಷಕರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು ‘ಶಿಕ್ಷಕ ಮಿತ್ರ’ ಆಪ್ ಅಭಿವೃದ್ಧಿ.
* “ಸಂಭ್ರಮ ಶನಿವಾರ” ಆಚರಣೆ-ಪ್ರತಿ ತಿಂಗಳಲ್ಲಿ ಎರಡು ಶನಿವಾರ ಬ್ಯಾಗ್ ರಹಿತ ದಿನ.
-ಆರು ವರ್ಷದೊಳಗಿನ ಮಕ್ಕಳಲ್ಲಿ ಜನ್ಮಜಾತ ಕಿವುಡುತನ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ, ಶ್ರವಣಯಂತ್ರ ಒದಗಿಸಿ ಗುಣಪಡಿಸುವ ಯೋಜನೆಗೆ 28 ಕೋಟಿ ರೂ. ಅನುದಾನ.
– ರಾಜ್ಯ ರಾಜಧಾನಿ ಬೆಂಗಳೂರಿನ ಚಿತ್ರಸಂತೆಗೆ 1 ಕೋಟಿ ರೂ. ಅನುದಾನ.
– ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ.
* ಪೆಟ್ರೋಲ್ ಮೇಲಿನ ತೆರಿಗೆ ಪ್ರಮಾಣ ಶೇ.32 ರಿಂದ ಶೇ.35ಕ್ಕೆ ಏರಿಕೆ
* ಡೀಸೆಲ್ ಮೇಲಿನ ತೆರಿಗೆ ಪ್ರಮಾಣ ಶೇ.21ರಿಂದ 24ಕ್ಕೆ ಏರಿಕೆ.
– ಮದ್ಯ ತೆರಿಗೆ ಸ್ಲಾಬ್ ಪ್ರಸ್ತುತ ದರದ ಮೇಲೆ 6 % ಹೆಚ್ಚಳ.
– ಸರ್ಕಾರಿ ಕಛೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಆನಂದ್ ರಾವ್ ಸರ್ಕಲ್ ನಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣ.
– ಬೆಂಗಳೂರು ಪೊಲೀಸರಿಗೆ 75 ಹೊಸ ಹೊಯ್ಸಳ ವಾಹನ.
– ಪೊಲೀಸ್ ಸಿಬ್ಬಂದಿಗಳಿಗಾಗಿ ‘ಗೃಹ ಭಾಗ್ಯ’ ಯೋಜನೆ. ಇದಕ್ಕಾಗಿ 200 ಕೋಟಿ ರೂ. ಮೀಸಲು.
– ಕೆಎಸ್‌ಆರ್‌ಟಿಸಿಗೆ 2450 ನೂತನ ಬಸ್.
– ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ‘ಮನೆ ಮನೆಗೆ ಗಂಗೆ’ ಎಂಬ ನೂತನ ಯೋಜನೆ.
– ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ 780 ಕೋಟಿ ರೂ. ಮೀಸಲು.
– 60 ವರ್ಷ ಮೀರಿದ ಬಿಪಿಎಲ್ ಕಾರ್ಡ್ ದಾರರಿಗೆ ಜೀವನಚೈತ್ರ ಯಾತ್ರೆ ಯೋಜನೆ ಮೂಲಕ ಪ್ರಸಿದ್ಧ ತೀರ್ಥಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ. ಇದಕ್ಕಾಗಿ 20 ಕೋತಿ ರೂ. ಮೀಸಲು.
– 400 ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳ ಆರಂಭ

ಮಕ್ಕಳ ಆಯವ್ಯಯ ಮಂಡನೆ:
ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಆಯವ್ಯಯ ಮಂಡನೆ ಮಾಡಿರುವ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ರಾಜ್ಯದ ಬದ್ಧತೆಯನ್ನು ಇದು ತೋರಿಸುತ್ತಿದೆ. 2020-21ನೇ ಸಾಲಿನ ಆಯವ್ಯಯದಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪ ಮಾಡಿದ್ದಾರೆ. ಇದಕ್ಕಾಗಿ ಒಟ್ಟಾರೆ ಆಯವ್ಯಯ ಗಾತ್ರದ 15.28 ರಷ್ಟನ್ನು ಮೀಸಲಿಡಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ