ಕೇಂದ್ರಕ್ಕೆ ಹಣ ವರ್ಗಾಯಿಸಲು ಬಹುಮತ ಇಲ್ಲದಿದ್ದರೂ ಫಡ್ನವೀಸ್ ಸಿಎಂ ಆದರು; ಸಂಸದ ಅನಂತ್​ಕುಮಾರ್ ಹೆಗಡೆ

ಶಿರಸಿ : ಮುಖ್ಯಮಂತ್ರಿ ಫಂಡ್​​ನಲ್ಲಿದ್ದ 40 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ದೇವೇಂದ್ರ ಫಡ್ನವೀಸ್​ ಮಹಾರಾಷ್ಟ್ರದಲ್ಲಿ ನಾಲ್ಕು ದಿನದ ಮುಖ್ಯಮಂತ್ರಿ ಆಗಿದ್ದರು ಎನ್ನುವ ಮಾಹಿತಿ ವಾಟ್ಸ್​​ಆ್ಯಪ್​ನಲ್ಲಿ ಹರಿದಾಡಿತ್ತು. ಅನೇಕರು ಇದನ್ನು ಸುಳ್ಳು ಎಂದು ಜರಿದಿದ್ದರು. ಕೆಲವರು ಇದನ್ನು ನಂಬಿದ್ದರು. ಈಗ ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತ್​ಕುಮಾರ್​ ಹೆಗಡೆ ಕೂಡ ಇದೇ ರೀತಿಯ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚೆಗೆ ತಾಲೂಕಿನ ಬಂಕನಾಳನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅನಂತ್​ ಕುಮಾರ್​ ಹೆಗಡೆ, “ಮಹಾರಾಷ್ಟ್ರದಲ್ಲಿ ಬಹುಮತ ಇರಲಿಲ್ಲ ಎನ್ನುವುದು ಗೊತ್ತಿದ್ದರೂ ಫಡ್ನವೀಸ್​ ಸಿಎಂ ಆಗಿದ್ದೇಕೆ?. ಇದನ್ನು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವಿದೆ. ಸಿಎಂ ​ನಿಯಂತ್ರಣದಲ್ಲಿ 40 ಸಾವಿರ ಕೋಟಿ ರೂಪಾಯಿ ಇತ್ತು. ಇದನ್ನು ಕೇಂದ್ರಕ್ಕೆ ವರ್ಗಾಯಿಸಲು ಫಡ್ನವೀಸ್​ ಸಿಎಂ ಆದರು,” ಎಂದರು.

ಅಷ್ಟಕ್ಕೂ ಈ ಹಣ ವರ್ಗಾವಣೆ ಮಾಡಿದ್ದೇಕೆ? ಈ ಪ್ರಶ್ನೆಗೆ ಉತ್ತರಿಸಿರುವ ಅನಂತ್​ ಕುಮಾರ್​ ಹೆಗಡೆ, “ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಈ ಹಣವನ್ನು ಅಭಿವೃದ್ಧಿ ಬಳಕೆ ಮಾಡದೆ ಅದಕ್ಕೆ ಎಳ್ಳು ನೀರು ಬಿಡುತ್ತಿದ್ದರು. ಹೀಗಾಗಿ ಸಿಎಂ ಆಗಿ ಫಡ್ನವೀಸ್​ ಅಧಿಕಾರ ತೆಗೆದುಕೊಂಡರು. ಕೇವಲ 15 ಗಂಟೆಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ವರ್ಗಾವಣೆ ಮಾಡಿದರು,” ಎಂದರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎನ್​ಸಿಪಿ ನಾಯಕ ಅಜಿತ್​ ಪವಾರ್​ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. 40 ಸಾವಿರ ಕೋಟಿ ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಅವರು ಈ ರೀತಿ ಮಾಡಿದ್ದರು ಎನ್ನುವ ಸಂದೇಶ ವಾಟ್ಸ್​​ಆ್ಯಪ್​ನಲ್ಲಿ ಹರಿದಾಡಿತ್ತು.

ಫಡ್ನವೀಸ್ ಸ್ಪಷ್ಟನೆ​:
ಅನಂತ್​ಕುಮಾರ್​ ಹೆಗಡೆ ನೀಡಿರುವ ಹೇಳಿಕೆಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಒಪ್ಪಿಲ್ಲ.  “ನಾಲ್ಕು ದಿನಗಳ ಅಧಿಕಾರದಲ್ಲಿ ಬರ ಪೀಡಿತ ರೈತರಿಗೆ 5,380 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ