ಕುರುಬ ಸಮುದಾಯದ ಆಕ್ರೋಶ: ಕಾಗಿನೆಲೆ ಸ್ವಾಮೀಜಿ ಜೊತೆ ಸಂಧಾನಕ್ಕೆ ಮುಂದಾದ ಸಚಿವ ಮಾಧುಸ್ವಾಮಿ

ದಾವಣಗೆರೆ: ಕಾಗಿನೆಲೆ ಶಾಖಾಮಠದ ಶ್ರೀಗಳ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿ ಕುರುಬ ಸಮಾಜದ ಕೆಂಗಣ್ಣಿಗೆ ಗುರಿಯಾಗಿರುವ ಸಚಿವ ಮಾಧುಸ್ವಾಮಿ ವಿರುದ್ಧ ರಾಜ್ಯದ್ಯಾಂ ತ ಪ್ರತಿಭಟನೆ ನಡೆಯುತ್ತಿದೆ. ಉಪಚುನಾವಣೆ ಸಮಯದಲ್ಲಿ  ಕುರುಬ ಸಮುದಾಯದ ವಿರುದ್ಧ ಅವರು ನೀಡಿರುವ ಹೇಳಿಕೆ ಸಾಕಷ್ಟು ಹಾನಿಯುಂಟು ಮಾಡಿದ್ದು, ಸಿಎಂ  ಬಿಎಸ್​ ಯಡಿಯೂರಪ್ಪ ಅವರ ಪರ ಕ್ಷಮೆ ಕೇಳಿ ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದ್ದರು. ಆದರೆ, ಮಾಧುಸ್ವಾಮಿ ಮಾತ್ರ ಈ ವಿಚಾರದಲ್ಲಿ ಕ್ಷಮೆ ಕೇಳದೇ ಪಟ್ಟು ಹಿಡಿದಿದ್ದು, ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 

ಈ ವಿವಾದಕ್ಕೆ ತೆರೆಎಳೆಯಲು ಮುಂದಾಗಿರುವ ಬಿಜೆಪಿ ನಾಯಕರು ಇಂದು ಮಾಧುಸ್ವಾಮಿ ಹಾಗೂ ಕಾಗಿನೆಲೆ ಸ್ವಾಮೀಜಿಯೊಂದಿಗೆ ಸಂಧಾನ ಸಭೆ ನಡೆಸಲು ಮುಂದಾಗಿದ್ದಾರೆ. ಹರಿಹರ ತಾಲೂಕಿ ಬೆಳ್ಳೂಡಿಯಲ್ಲಿರುವ ಶಾಖಾಮಠದಲ್ಲಿ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸಚಿವ ಮಾಧುಸ್ವಾಮಿ ಸೇರಿದಂತೆ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಕೂಡ ಈ ಸಭೆಯಲ್ಲಿ ಹಾಜರಿರಲಿದ್ದು, ಸಂಧಾನ ಕ್ರಿಯೆ ನಡೆಸಲಿದ್ದಾರೆ.

ಮಾಧುಸ್ವಾಮಿ ವಿವಾದ ದಿನೇ ದಿನೇ ಹೆಚ್ಚುತ್ತಿದ್ದು, ಉಪಚುನಾವಣೆ ಸಮಯದಲ್ಲಿ ಕುರುಬ ಸಂಖ್ಯೆ ಮತಗಳನ್ನು ಕಳೆದುಕೊಳ್ಳುವ ಭೀತಿ ಕೂಡ ಬಿಜೆಪಿ ನಾಯಕರಲ್ಲಿ ಎದುರಾಗಿದೆ. ಮಾಧುಸ್ವಾಮಿ ವರ್ತನೆಯಿಂದ ಆಕ್ರೋಶಗೊಂಡಿರುವ ಪಕ್ಷ ಈಗಾಗಲೇ ಅವರನ್ನು ಕೆಆರ್​ ಪೇಟೆ ಚುನಾವಣಾ ಉಸ್ತುವಾರಿಯಿಂದ ಕೂಡ ತೆಗೆದುಹಾಕಿದೆ.

ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ವಿರುದ್ಧ ಅವಹೇಳನ ಮಾಡಿರುವ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಇಂದು ಹುಳಿಯಾರು ಪಟ್ಟಣ ಬಂದ್​ಗೂ ಕರೆ ನೀಡಲಾಗಿದೆ. ಅಲ್ಲದೇ ರಾಜ್ಯದ ವಿವಿಧೆಡೆ ಕುರುಬ ಸಮುದಾಯ ಅವರ ವಿರುದ್ಧ ಪ್ರತಿಭಟನೆ ನಡೆಸಿದೆ.
ಈ ಹಿನ್ನೆಲೆ ಮಾಧುಸ್ವಾಮಿ ಶ್ರೀಗಳನ್ನು ಭೇಟಿಯಾಗಿ ಕ್ಷಮೆ ಕೋರಲಿದ್ದು, ಈ ವಿಷಯದಲ್ಲಿ ಸಂಧಾನ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ಈ ವಿವಾದಕ್ಕೆ ತೆರೆಎಳೆಯಲು ಸಿದ್ದವಾಗಿದ್ದಾರೆ. ಸಂಧಾನದ ಬಳಿಕ ಮಧ್ಯಾಹ್ನ ಮೂರುಗಂಟೆಗೆ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ