ಬೆಂಗಳೂರು: ಈಗಾಗಲೇ ನಾನು ಬಿಜೆಪಿಯಿಂದ ಹೊರ ಬಂದಿದ್ದೇನೆ. ನಾಳೆ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದು, ನ.13ರಂದು ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡನೆಯಾಗುತ್ತೇನೆ ಎಂದು ಬಿಜೆಪಿ ಬಂಡಾಯನಾಯಕ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಜತೆ ಮಾತನಾಡಿರುವ ಅವರು, ಈಗಾಗಲೇ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಭೇಟಿಯಾಗಿದ್ದು. ಪಕ್ಷ ಸೇರ್ಪಡನೆ ಕುರಿತು ಮಾತನಾಡಿದ್ದೇನೆ. ಕಾಂಗ್ರೆಸ್ ನಾಯಕರು ಟಿಕೆಟ್ ನೀಡುವ ಭರವಸೆ ನೀಡಿದ್ದು, ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದಿದ್ದಾರೆ.
ಕಾಗವಾಡ ಕ್ಷೇತ್ರದಲ್ಲಿ ಪಕ್ಷ ಅನರ್ಹ ಶಾಸಕ ಶ್ರೀಮಂತಗೌಡ ಪಾಟೀಲ್ಗೆ ಟಿಕೆಟ್ ನೀಡಲು ಮುಂದಾಗಿರುವ ಹಿನ್ನೆಲೆ ಕ್ಷಿಪ್ರ ರಾಜಕೀಯಕ್ಕೆ ಮುಂದಾದ ರಾಜು ಕಾಗೆ ಈ ನಿರ್ಧಾರ ಪ್ರಕಟಿಸಿದ್ದಾರೆ. ಈಗ ನಾನು ಮನೆಯಲ್ಲಿ ಕೂತರೆ ಜೀವನಪರ್ಯಂತ ಮನೆಯಲ್ಲಿಯೇ ಕೂರಬೇಕಾಗುತ್ತದೆ. ಕಳೆದ ಬಾರಿ ಕಡಿಮೆ ಅಂತರಗಳಿಂದ ಸೋತಿದ್ದೇನೆ. ಈಗ ಪಕ್ಷ ಟಿಕೆಟ್ ನೀಡಲು ನಿರಾಕರಿಸಿದೆ. ಈ ಕುರಿತು ಯಡಿಯೂರಪ್ಪ ಕೂಡ ಒಮ್ಮೆ ಮಾತುಕತೆ ನಡೆಸಿದರು.
ನಿನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕೊಡುತ್ತೇನೆ. ಸುಮ್ಮನಿರು ಎಂದರು. ಯಡಿಯೂರಪ್ಪ ಮಾತು ಕೇಳಿ ಸುಮ್ಮನಾದೆ. ಆದರೆ ಈಗ ಶ್ರೀಮಂತ ಪಾಟೀಲ್ ಗೆಲ್ಲಿಸಿಕೊಂಡು ಬನ್ನಿ ಎಂದರು. ಅವರ ವಿರುದ್ಧ ಪ್ರಚಾರ ಮಾಡಿ ಈಗ ಅವರ ಗೆಲುವಿಗೆ ಹೋರಾಡುವುದು ಸರಿಯಲ್ಲ. ಆಗುವುದಿಲ್ಲ ಎಂದೆ. ಇದೇ ಹಿನ್ನೆಲೆ ಈಗ ಪಕ್ಷ ಬಿಡುವ ನಿರ್ಧಾರ ಕೈಗೊಂಡಿದ್ದು. ಈಗ ಎಲ್ಲವೂ ಮುಗಿದ ಅಧ್ಯಯ ಎಂದರು.
ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದು, ಪಕ್ಷದಿಂದ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ. ಈಗ ಬಿಜೆಪಿಯವರು ಎಷ್ಟೇ ಮನವೊಲಿಸುದರೂ ಪ್ರಯೋಜನವಿಲ್ಲ. ಎಲ್ಲವೂ ನಿರ್ಧಾರವಾಗಿದೆ. ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸಿಎಂ ಪದವಿ ಕೊಟ್ಟರು ನಾನು ಮರಳಿ ಬಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.