ಮುಗಿಯದ ಮಹಾ ಕಸರತ್ತು: ಪಟ್ಟು ಬಿಡದ ಸೇನೆ; ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ

ಮುಂಬೈ: ಮಹಾರಾಷ್ಟ್ರದ ಹಿಂದಿನ ವಿಧಾನಸಭಾ ಅವಧಿ ನಾಳೆ ಮುಕ್ತಾಯವಾಗಲಿದ್ದು, ಇಂದು ಮಧ್ಯರಾತ್ರಿ ವಿಧಾನಸಭೆ ವಿಸರ್ಜನೆಯಾಗಲಿದೆ. ಸರ್ಕಾರ ರಚನೆ ಕುರಿತು ಶಿವಸೇನೆ-ಬಿಜೆಪಿ ಇನ್ನು ಒಮ್ಮತಕ್ಕೆ ಬಾರದ ಹಿನ್ನೆಲೆ ಈ ಕಸರತ್ತು ಇನ್ನು ಮುಂದುವರೆಯಲಿದೆ.

ಬಿಜೆಪಿ ಅಲ್ಪಬಹುಮತ ಸರ್ಕಾರ ನಡೆಸಲು ಸಿದ್ಧವಿಲ್ಲ ಎಂದು ರಾಜ್ಯಪಾಲರ ಮುಂದೆ ಸ್ಪಷ್ಟಪಡಿಸಿರುವ ಬಿಜೆಪಿ ಇಂದು ಅಂತಿಮ ಹಂತವಾಗಿ ಸೇನೆನಾಯಕರೊಂದಿಗೆ ಮಾತುಕತೆ ನಡೆಸಲಿದೆ. ಮುಖ್ಯಮಂತ್ರಿ ಪದವಿಗಾಗಿ ಇಟ್ಟಿರುವ ಪಟ್ಟು ಸಡಿಲಿಸದ ಹಿನ್ನೆಲೆ ಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆಯನ್ನು ಇಂದು ಗಡ್ಕರಿ ಭೇಟಿಯಾಗುವ ಸಾಧ್ಯತೆ ಇದ್ದು, ಮನವೊಲಿಕೆ ನಡೆಸುವ ಸಾಧ್ಯತೆ ಇದೆ.

ಕುದುರೆ ವ್ಯಾಪಾರದ ಭೀತಿಯಲ್ಲಿರುವ ಸೇನೆ ತಮ್ಮ ಶಾಸಕರನ್ನು ಖಾಸಗಿ ಹೋಟೆಲ್​ನಲ್ಲಿ ಕೂಡಿಹಾಕಿದ್ದು, ಮುಖ್ಯಮಂತ್ರಿ ಸ್ಥಾನದ ಕುರಿತು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಮಧ್ಯೆ ರಾಜ್ಯದಲ್ಲಿ ನಡೆಯುತ್ತಿರುವ ಈ ಕಸರತ್ತು ನೋಡಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಎನ್​ಸಿಪಿ ಶಾಸಕರು ಆಗ್ರಹಿಸಿದ್ದಾರೆ.

ಸೇನೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್​ ತಮ್ಮ ಶಾಸಕರ ರಕ್ಷಣೆಗಾಗಿ ಅವರನ್ನೆಲ್ಲಾ ರಾಜಸ್ಥಾನಕ್ಕೆ ಸ್ಥಳಾಂತರಿಸಿದ್ದಾರೆ. ಇಂದು ಬೆಳಗ್ಗೆ 44 ಕಾಂಗ್ರೆಸ್​ ಶಾಸಕರು ಜೈಪುರದ ರೆಸಾರ್ಟ್​ಗೆ ಶಿಫ್ಟ್​ ಆಗಿದ್ದಾರೆ.

2.5 ವರ್ಷದ ಅವಧಿಗೆ ಸೇನೆಗೆ ಸಿಎಂ ಸ್ಥಾನ ನೀಡುವ ಪ್ರಸ್ತಾಪಕ್ಕೆ ಒಪ್ಪಿದರೆ ಮಾತ್ರ ಬಿಜೆಪಿಯೊಂದಿಗೆ ಮಾತುಕತೆ ನಡೆಸಲಾಗುವುದು. ಈ ಪ್ರಸ್ತಾಪಕ್ಕೆ ಬಿಜೆಪಿ ಒಪ್ಪಿಕೊಳ್ಳಲು ವಿಫಲವಾದರೆ, ಇಂದು ಮಧ್ಯರಾತ್ರಿಯಿಂದ ರಾಷ್ಟ್ರಪತಿ ಆಡಳಿತ ಹೇರಿಕೆಯಾಗಲಿದೆ ಎಂದು ರಾಜ್ಯಸಭಾ ಸದಸ್ಯ ಸಂಜರ್​ ರಾವತ್​ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ