ಕಚೇರಿಯ ಸಿಬ್ಬಂದಿಗಳಿಗೆ ಅಧಿಕಾರವನ್ನು ಮರುಹಂಚಿಕೆಮಾಡಿದ ಮುಖ್ಯಮಂತ್ರಿಗಳು

ಬೆಂಗಳೂರು,ಅ.18-ಶಾಸಕರು, ಸಂಸದರು ಹಾಗೂ ಅಧಿಕಾರಿಗಳಿಂದ ತೀವ್ರ ವಿರೋಧ ಹಾಗೂ ದೂರುಗಳು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕಚೇರಿಯ ಸಿಬ್ಬಂದಿಗಳಿಗೆ ಅಧಿಕಾರವನ್ನು ಮರುಹಂಚಿಕೆ ಮಾಡಿದ್ದಾರೆ.

ಜುಲೈ 26ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಯಡಿಯೂರಪ್ಪ  ಮೂರನೇ ಬಾರಿಗೆ  ತಮ್ಮ ಕಚೇರಿಯ ಸಿಬ್ಬಂದಿಗೆ  ಅಧಿಕಾರವನ್ನು ಮರು ಹಂಚಿಕೆ ಮಾಡಿರುವುದು ವಿಶೇಷ ಎನಿಸಿದೆ.

ಕೆಲವು ದಿನಗಳಿಂದ ಸಿಎಂ ಕಚೇರಿಯಲ್ಲಿರುವ ಸಿಬ್ಬಂದಿಯ ಬಗ್ಗೆ ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಬಿಎಸ್‍ವೈಗೆ ದೂರು ನೀಡಿದ್ದರು.ಕ್ಷೇತ್ರಕ್ಕೆ ಸಂಬಂಧಿಸಿದ ಅನುದಾನ ಬಿಡುಗಡೆ, ಕಾಮಗಾರಿ ಸೇರಿದಂತೆ ಪ್ರತಿಯೊಂದರಲ್ಲೂ ಅಧಿಕಾರಿಗಳು ತಗಾದೆ ತೆಗೆಯುತ್ತಾರೆಂದು ಆಕ್ಷೇಪಿಸಿದ್ದರು.

ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಕೆಲ ದಿನಗಳ ಹಿಂದೆ ತಮ್ಮ ಕಚೇರಿಯ ಕಾರ್ಯದರ್ಶಿಯಾಗಿದ್ದ ಬಿ.ವಿ.ಇಕ್ಕೇರಿ ಅವರನ್ನು ಎತ್ತಂಗಡಿ ಮಾಡಿದ್ದರು. ಒಂದು ಹಂತದಲ್ಲಿ ಸಿಎಂ ಕಚೇರಿಯ ಅಧಿಕಾರಿಗಳ ಅತಿಯಾದ ವರ್ತನೆ ವಿರುದ್ಧ ಕೆಲ ಶಾಸಕರು ಹೈಕಮಾಂಡ್‍ಗೂ ದೂರು  ನೀಡಿದ್ದರು ಎನ್ನಲಾಗಿದೆ.

ನಮ್ಮ ಕಷ್ಟಗಳಿಗೆ ಸ್ಪಂದಿಸುವುದಿಲ್ಲ. ಯಾವುದೇ  ಆದೇಶಕ್ಕೂ ಬೆಲೆ ಕೊಡುವುದಿಲ್ಲ. ಮುಖ್ಯಮಂತ್ರಿಗಳ ಮಾತಿಗೂ ಕಿಮ್ಮತ್ತು ನೀಡುವುದಿಲ್ಲ. ಪ್ರತಿಯೊಂದಕ್ಕೂ ತಾಂತ್ರಿಕ ಕಾರಣಗಳನ್ನು ನೀಡಿ ವಿಳಂಬ ಮಾಡುತ್ತಿದ್ದಾರೆಂಬ ದೂರು ಸಲ್ಲಿಕೆಯಾಗಿv್ತು.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಕೂಡ ಶಾಸಕರ ಮನವಿಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ಸಿಎಂಗೆ ಮನವಿ ಮಾಡಿದ್ದರು.ಕೊನೆಗೂ ಯಡಿಯೂರಪ್ಪ ಸಿಬ್ಬಂದಿಗೆ ಅಧಿಕಾರವನ್ನು ಮರು ಹಂಚಿಕೆ ಮಾಡಿದ್ದಾರೆ.

ಅಧಿಕಾರ ಹಂಚಿಕೆ:

ಪಿ.ರವಿಕುಮಾರ್-ಸಿಎಂ ಹೆಚ್ಚುವರಿ ಕಾರ್ಯದರ್ಶಿ

ಇಲಾಖೆಗಳು: ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಹಣಕಾಸು, ನಗರಾಭಿವೃದ್ಧಿ, ಅಂತಾರಾಜ್ಯ ಜಲವಿವಾದ, ಮೂಲಭೂತ ಯೋಜನೆಗಳು,  ಸಂಪುಟಸಭೆಯ ಕಾರ್ಯಸೂಚಿ ಹಾಗೂ  ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದೊಂದಿಗೆ ಸಮಾಲೋಚನೆ.

ಶಿವಯೋಗಿ ಸಿ.ಕಳಸದ್ -ಮುಖ್ಯಮಂತ್ರಿಗಳ ಕಾರ್ಯದರ್ಶಿ

ಇಲಾಖೆಗಳು- ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಗೃಹ, ಜಲಸಂಪನ್ಮೂಲ, ಸಣ್ಣ ನೀರಾವರಿ, ವಾಣಿಜ್ಯ ಮತ್ತು ಕೈಗಾರಿಕೆ, ಸಣ್ಣ ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನ, ಉನ್ನತ ಶಿಕ್ಷಣ, ವಾಣಿಜ್ಯ ತೆರಿಗೆ ಸೇವೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಾಭಿವೃದ್ಧಿ, ಸಾರಿಗೆ, ಅರಣ್ಯ, ಜೈವಿಕ ಮತ್ತು ಪರಿಸರ ಸೇರಿದಂತೆ ಮತ್ತಿತರ ಇಲಾಖೆಗಳನ್ನು ವಹಿಸಲಾಗಿದೆ.

ಎಂ.ಕೆ.ಶ್ರೀರಂಗಯ್ಯ- ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ.

ಇಲಾಖೆಗಳು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಸಮಾಜ ಕಲ್ಯಾಣ,  ಅಲ್ಪಸಂಖ್ಯಾತ ಕಲ್ಯಾಣ , ಪಶುಸಂಗೋಪನೆ ಇಲಾಖೆ, ಮೀನುಗಾರಿಕೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ, ಲೋಕೋಪಯೋಗಿ, ಹಿಂದುಳಿದ ವರ್ಗಗಳ ಕಲ್ಯಾಣ, ಅಬಕಾರಿ, ಶಿವಮೊಗ್ಗ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಉಸ್ತುವಾರಿ, ಅಧಿಕಾರಿಗಳ ವರ್ಗಾವಣೆ ಉಸ್ತುವಾರಿ   ವಹಿಸಲಾಗಿದೆ.

ರಾಜಪ್ಪ – ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ

ಇಲಾಖೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜವಳಿ, ವಾರ್ತಾ ಇಲಾಖೆ, ಕೌಶಲ್ಯಾಭಿವೃದ್ಧಿ, ಸಕ್ಕರೆ, ಗಣ್ಯ ವ್ಯಕ್ತಿಗಳು ಮತ್ತು ಸಾರ್ವಜನಿಕರ ಕುಂದುಕೊರತೆ ಹಾಗೂ  ಮುಖ್ಯಮಂತ್ರಿಗಳ ಗೃಹಕಚೇರಿಯಲ್ಲಿ ಕೃಷ್ಣದಲ್ಲಿ ಸಮನ್ವಯತೆ.

ಪಿ.ಎ.ಗೋಪಾಲ್-  ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ

ಇಲಾಖೆ- ಮುಖ್ಯಮಂತ್ರಿಗಳ ಪರಿಹಾರ  ನಿಧಿ.

ವಿಶ್ವನಾಥ್ ಪಿ.ಹಿರೇಮಠ್ –  ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ

ಇಲಾಖೆ- ಸಾರ್ವಜನಿಕ ಉದ್ಯಮ, ಸಹಕಾರ, ಕಾರ್ಮಿಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ.

ರವಿ.ಎ.ಆರ್- ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ

ಇಲಾಖೆ-ಯೋಜನೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರ, ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು ಉಸ್ತುವಾರಿ, ಮುಖ್ಯಮಂತ್ರಿ ಕಚೇರಿಯ ಉಸ್ತುವಾರಿ, ಪ್ರತಿಬಿಂಬ ಯೋಜನೆಯ ಉಸ್ತುವಾರಿ, ಜನತಾದರ್ಶನ ಹಾಗೂ ಶಾಸಕರು ಮತ್ತು ಸಂಸದರು ಅಭಿವೃದ್ಧಿ ಯೋಜನೆಗಳ ಉಸ್ತುವಾರಿ.

ಡಾ.ಎ.ಲೋಕೇಶ್- ವಿಶೇಷ ಕರ್ತವ್ಯಾಧಿಕಾರಿ, ಇಲಾಖೆ- ಮುಖ್ಯಮಂತ್ರಿ ನಿವಾಸದ ಉಸ್ತುವಾರಿ

ವಿಜಯ್ ಮಹೇಶ್ ದಾನಮ್ಮನವರ್- ಮುಖ್ಯಮಂತ್ರಿ ವಿಶೇಷ ಕರ್ತವಾಧಿಕಾರಿ, ಇಲಾಖೆ- ಮುಖ್ಯಮಂತ್ರಿಯವರ ಶಿಷ್ಟಾಚಾರ ಪಾಲನೆ, ಸಭೆಗಳ ನಿರ್ವಹಣೆ.

ಚನ್ನಬಸವೇಶ- ಮುಖ್ಯಮಂತ್ರಿಗಳ ಕಾರ್ಯದರ್ಶಿ

ಇಲಾಖೆ- ಸಭೆ ಏರ್ಪಡಿಸುವುದು,  ಪ್ರವಾಸ ನಿಗದಿ ಹಾಗೂ ದಿನನಿತ್ಯದ ಕಾರ್ಯಕ್ರಮಗಳ ನಿರ್ವಹಣೆ.

ಎಚ್.ಡಿ.ಸತೀಶ್-ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ

ಇಲಾಖೆ: ಗೃಹ ಕಚೇರಿ ಕೃಷ್ಣಾದ ಉಸ್ತುವಾರಿ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ