‘ಇಲ್ಲಿಗೆ ಸಾಕು, ಅಯೋಧ್ಯೆ ವಿಚಾರಣೆ ಇಂದು ಸಂಜೆ 5 ಗಂಟೆಗೆ ಮುಕ್ತಾಯ’

ನವದೆಹಲಿ: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಕೇಸಿನ ಪ್ರತಿದಿನದ ನ್ಯಾಯಾಲಯ ಕಲಾಪ ಬುಧವಾರ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಯೋಧ್ಯೆ ಕೇಸಿನ 40ನೇ ಮತ್ತು ಅಂತಿಮ ದಿನದ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಇಂದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಇಲ್ಲಿಗೆ ಸಾಕು, ಮುಗಿಸಿಬಿಡೋಣ ಎಂದರು. ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಹಿಂದೂ ಮಹಾಸಭಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳು ಹೀಗೆ ಹೇಳಿದರು.
ಹಿಂದೂ ಮಹಾಸಭಾ ವಿವಾದದಲ್ಲಿ ಕಕ್ಷಿದಾರನಾಗಿದೆ. ಅರ್ಜಿಯನ್ನು ಹಿಂತೆಗೆದುಕೊಂಡ ಸುನ್ನಿ ವಕ್ಫ್ ಬೋರ್ಡ್ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಇಂದು ಪ್ರಸ್ತಾಪಿಸಲಿಲ್ಲ.

ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, 2010ರ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸುತ್ತಿತ್ತು. ಅಂದು ಅಲಹಬಾದ್ ಹೈಕೋರ್ಟ್ ತೀರ್ಪು ನೀಡಿ, ಅಯೋಧ್ಯೆಯಲ್ಲಿ ವಿವಾದಿತ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೊಹಿ ಅಕ್ಹರ ಮತ್ತು ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೊಳ್ಳಿ ಎಂದು ಹೇಳಿತ್ತು.
16ನೇ ಶತಮಾನದ ಬಾಬ್ರಿ ಮಸೀದಿಯನ್ನು ಇಲ್ಲಿ 1992ರ ಡಿಸೆಂಬರ್ 6ರಂದು ಕೆಡವಿ ಹಾಕಲಾಗಿತ್ತು.
ಇತ್ತೀಚೆಗೆ ಸುಪ್ರೀಂ ಕೋರ್ಟ್, ನಿಗದಿತ ಅವಧಿ ಅಕ್ಟೋಬರ್ 17ಕ್ಕಿಂತ ಒಂದು ದಿನ ಮೊದಲೇ ವಿಚಾರಣೆ ಮುಗಿಸುವುದಾಗಿ ಹೇಳಿತ್ತು. ಅಯೋಧ್ಯೆ ತೀರ್ಪು ನವೆಂಬರ್ 4 ಅಥವಾ 5ರಂದು ಪ್ರಕಟವಾಗುವ ನಿರೀಕ್ಷೆಯಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ