ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯ ರಥೋತ್ಸವ; ರಥ ಎಳೆದು ದೇವಿ ದರ್ಶನ ಪಡೆದ ಭಕ್ತಗಣ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ಬೆಳಗ್ಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಬಳಿಕ ಚಾಮುಂಡಿ ರಥೋತ್ಸವ ಆಚರಿಸಲಾಗುತ್ತದೆ.
ಯದುವಂಶದ ಯದುವೀರ್​ ಒಡೆಯರ್​ ರಥ ಎಳೆದು ಚಾಮುಂಡಿ ರಥೋತ್ಸವಕ್ಕೆ ಚಾಲನೆ ನೀಡಿದರು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ದೊಡ್ಡ ರಥದಲ್ಲಿಟ್ಟು ದೇವಾಲಯದ ಸುತ್ತ ಒಂದು ಸುತ್ತು ಹಾಕಿ  ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುತ್ತದೆ. ಸಾವಿರಾರು ಮಂದಿ ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥ ಎಳೆದು ಚಾಮುಂಡೇಶ್ವರಿ ದರ್ಶನ ಪಡೆದು ಪುನೀತರಾದರು.

ರಥೋತ್ಸವದ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ, ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್​ ಚಾಮುಂಡೇಶ್ವರಿ ದರ್ಶನ ಪಡೆದರು. ರಥೋತ್ಸವ ಸಾಗುವ ಮಾರ್ಗದಲ್ಲಿ ನಿಂತು ಚಾಮುಂಡಿ ದೇವಿಗೆ ನಮನ ಸಲ್ಲಿಸಿದರು.
ಬಳಿಕ  ಪ್ರಮೋದಾವಿ ಮತ್ತು ಯದುವೀರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. “ದಸರಾ ಯಶಸ್ವಿಯಾಗಿ ಮುಗಿದಿದೆ. ಸಂಪ್ರದಾಯದಂತೆ ಚಾಮುಂಡೇಶ್ವರಿ ರಥೋತ್ಸವ ನಡೆದಿದೆ. ರಾಜ್ಯಕ್ಕೆ ಮಳೆ-ಬೆಳೆ ಸುಭಿಕ್ಷವಾಗಿ ಇರಲಿ ಎಂದು ಪ್ರಾರ್ಥಿಸಿದ್ದೇವೆ,” ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ