ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು, ಅ.2-ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಕಳೆದ ಐದಾರು ವರ್ಷಗಳಿಂದ ಗೊಂದಲ ಗೂಡಾಗಿರುವ ಜಾತಿ ಜನಗಣತಿಯ ವರದಿಯನ್ನು ಅಂಗೀಕಾರ ಅಥವಾ ತಿರಸ್ಕಾರ ಮಾಡಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡದೆ ಈವರೆಗಿನ ಎಲ್ಲಾ ಸರ್ಕಾರಗಳು ನಯವಾಗಿ ಜಾರಿಕೊಂಡಿದ್ದವು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಿಟ್ಟ ನಿರ್ಧಾರಕ್ಕೆ ಮುಂದಾಗಿದ್ದು, ವರದಿಯನ್ನು ಸಂಪುಟ ಸಭೆಯಲ್ಲಿಟ್ಟು ತಿರಸ್ಕರಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ 195 ಕೋಟಿ ರೂ.ಖರ್ಚು ಮಾಡಿ, ಮನೆ ಮನೆ ಸಮೀಕ್ಷೆ ನಡೆಸಿ ಜಾತಿ ಜನಗಣತಿ ವರದಿ ಸಿದ್ಧಪಡಿಸಲಾಗಿದೆ.ಇದನ್ನು ಬಹಿರಂಗಪಡಿಸಬೇಕು ಎಂದು ಹಲವು ಸಂಘಟನೆಗಳು ಒತ್ತಾಯಿಸಿದ್ದವು.ಸರ್ಕಾರದ ಒಳಗೂ ಒತ್ತಡಗಳು ಕೇಳಿ ಬಂದಿದ್ದವು. ಆದರೆ ಸಿದ್ದರಾಮಯ್ಯ ಸರ್ಕಾರ 5 ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿದರೂ ವರದಿಯ ತಂಟೆಗೆ ಹೋಗಲಿಲ್ಲ.

ಸರ್ಕಾರಿ ಸೌಲಭ್ಯಗಳ ಹಂಚಿಕೆ ಸಮರ್ಪಕವಾಗಿ ನಡೆಯಬೇಕಾದರೆ ಜಾತಿಯ ಜನಸಂಖ್ಯೆ ನಿಖರವಾಗಿ ತಿಳಿಯಬೇಕು. ಯಾವ ಜಾತಿ ಎಷ್ಟು ಸೌಲಭ್ಯ ಪಡೆದುಕೊಂಡಿದೆ ಎಂಬ ಮಾಹಿತಿ ಸ್ಪಷ್ಟವಾಗಬೇಕು ಮತ್ತು ನ್ಯಾಯಾಲಯಗಳ ವಿಚಾರಣೆ ವೇಳೆ ಕರಾರುವಕ್ಕಾದ ವಾದ ಮಂಡಿಸಲು ಅನುಕೂಲವಾಗಬೇಕು ಎಂಬ ಕಾರಣಕ್ಕಾಗಿ 1997ರಲ್ಲಿ ಜಾತಿ ಜನಗಣತಿಗೆ ಪ್ರಯತ್ನಗಳು ಆರಂಭವಾದವು.
ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ 21.5 ಕೋಟಿ ರೂ.ಬಿಡುಗಡೆ ಮಾಡಿತ್ತು.ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಒಂದೂವರೆ ಕೋಟಿ ರೂ.ನೀಡಿದರು.ಎಲ್ಲವೂ ಸಿದ್ಧಗೊಂಡು ಸಮೀಕ್ಷೆ ಆರಂಭಗೊಳ್ಳುವ ವೇಳೆಗೆ ಆಯೋಗದ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಅವರ ಅವಧಿ ಮುಗಿದಿತ್ತು.ರಾಜಕೀಯವಾಗಿ ಹಲವು ಬದಲಾವಣೆಗಳಾದವು.

ನಂತರದ ಬೆಳವಣಿಗೆಯಲ್ಲಿ 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ಮತ್ತೆ ಜಾತಿಗಣತಿಗೆ ಚಾಲನೆ ಸಿಕ್ಕಿತ್ತು. 2015 ರಿಂದ ಸರಿಸುಮಾರು ಮೂರು ವರ್ಷಗಳ ಕಾಲ ನಿರಂತರ ಸಮೀಕ್ಷೆ ನಡೆದಿದೆ. ವರದಿ ಸಲ್ಲಿಕೆಗೆ ಸಿದ್ಧ ಇದೆ.ಆದರೆ ಅದರ ಮಾಹಿತಿ ಕಂಪ್ಯೂಟರ್‍ನಲ್ಲಷ್ಟೇ ಇದೆ.ಮುದ್ರಣದ ಸ್ವರೂಪದಲ್ಲಿ ಲಭ್ಯವಿಲ್ಲ. ಈವರೆಗಿನ ಯಾವ ಸಚಿವರೂ ಆ ವರದಿಯನ್ನು ನೋಡಿಲ್ಲ ಎಂದು ಹೇಳಲಾಗಿದೆ.

ಜಾತಿ ಸಮೀಕ್ಷೆ ಅಪೂರ್ಣವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಧಿಕೃತವಾಗಿ ವರದಿ ಬಿಡುಗಡೆಯಾಗದೆ ಇದ್ದರೂ, ಅನಧಿಕೃತವಾಗಿ ಸೋರಿಕೆಯಾಗಿತ್ತು.ಅದರಲ್ಲಿ ಕೆಲವು ಜಾತಿಗಳ ಜನಸಂಖ್ಯೆ ಹೆಚ್ಚಿದೆ, ಕೆಲವು ಕಡಿಮೆ ಇದೆ ಎಂಬ ಅವೈಜ್ಞಾನಿಕ ಮಾಹಿತಿಗಳು ಹರಿದಾಡಿದವು. ಇದು ವಿವಾದಕ್ಕೆ ಕಾರಣವಾಗಿತ್ತು. ಸರ್ಕಾರ ಸಮೀಕ್ಷೆಗೆ ಮೊದಲು ಜಾತಿಯ ಗುರುತಿಸುವಿಕೆ ವಿಷಯದಲ್ಲಿ ಸ್ಪಷ್ಟತೆ ಮತ್ತು ನಿಖರತೆಯನ್ನು ಅನುಸರಿಸಲಿಲ್ಲ. ಆದ್ದರಿಂದ ಇದು ಅವೈಜ್ಞಾನಿಕ ವರದಿ ತಿರಸ್ಕಾರ ಮಾಡಿ ಎಂಬ ಒತ್ತಾಯಗಳಿವೆ.

ಅತೀವ ಆಸಕ್ತಿಯಿಂದ ಸಮೀಕ್ಷೆ ನಡೆಸಿದ ಸಿದ್ದರಾಮಯ್ಯ ಅವರೇ ಕೊನೆಗೆ ಆ ವರದಿ ಸ್ವೀಕರಿಸಿ ಬಿಡುಗಡೆ ಮಾಡುವ ಗೋಜಿಗೆ ಹೋಗಲಿಲ್ಲ. ನಂತರ ಬಂದ ಎಚ್.ಡಿ.ಕುಮಾರಸ್ವಾಮಿಯವರು ಕೂಡ ವರದಿ ತಂಟೆಗೆ ಹೋಗಲಿಲ್ಲ.
ಇಂದಿರಾ ಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನುಸಾರ ಆಯೋಗ ಸಿದ್ಧಪಡಿಸಿದ ವರದಿಯನ್ನು ತಿರಸ್ಕರಿಸಬೇಕಾದರೆ ಸಂಪುಟದಲ್ಲಿ ಚರ್ಚೆಯಾಗಬೇಕು, ಒಪ್ಪಿತವಾದ ಸಕಾರಣಗಳನ್ನು ನೀಡಬೇಕು. ಇಲ್ಲದೆ ಹೋದರೆ ಅದನ್ನು ಹಾಗೇ ಇರಲು ಬಿಡಬೇಕು.

ಯಡಿಯೂರಪ್ಪ ಅವರ ಸರ್ಕಾರ ವರದಿ ಅವೈಜ್ಞಾನಿಕವಾಗಿದೆ, ಸಮರ್ಪಕವಾಗಿ ಸಮೀಕ್ಷೆ ನಡೆದಿಲ್ಲ, ಸಮೀಕ್ಷೆ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಸಂಪುಟದಲ್ಲಿ ಚರ್ಚಿಸಿ ವರದಿಯನ್ನು ತಿರಸ್ಕರಿಸಲು ಮುಂದಾಗಿದೆ ಎಂಬ ಮಾಹಿತಿ ಇದೆ.
ಬಿಡುಗಡೆಗೆ ನಕಾರ:
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಜಾತಿ ಸಮೀಕ್ಷೆ ವರದಿ ತಿರಸ್ಕಾರದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲು ನಿರಾಕರಿಸಿದರು.ವರದಿಯನ್ನು ಬಿಡುಗಡೆ ಮಾಡುತ್ತೀರ ಎಂಬ ಪ್ರಶ್ನೆಗೆ ತಲೆ ಅಲ್ಲಾಡಿಸಿ ಇಲ್ಲ ಎಂಬಂತೆ ಸನ್ನೆ ಮಾಡಿದ್ದಾರೆ.
ಯಾವ ಪ್ರಸ್ತಾವವೂ ಇಲ್ಲ:
ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಜಾತಿ ಜನಗಣತಿ ವರದಿಯನ್ನು ಅಂಗೀಕರಿಸುವ ಮತ್ತು ತಿರಸ್ಕರಿಸುವ ಪ್ರಸ್ತಾವ ನಮ್ಮ ಮುಂದಿಲ್ಲ. ನಾವು ಈ ವರದಿಯನ್ನು ನೋಡೇ ಇಲ್ಲ. ಹಿಂದಿನ ಸರ್ಕಾರ ಏನು ಮಾಡಿದೆ ಎಂದೂ ಗೊತ್ತಿಲ್ಲ. ಸದ್ಯಕ್ಕೆ ಆ ವರದಿ ವಿಷಯ ಹೆಚ್ಚು ಗೊತ್ತಿಲ್ಲದೆ ಇರುವುದರಿಂದ ತಿಳಿದುಕೊಂಡು ನಂತರ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಜನರ ದುಡ್ಡು ಅಪವ್ಯಯ:
ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಜನರ ತೆರಿಗೆ ದುಡ್ಡನ್ನು ಖರ್ಚು ಮಾಡಿ ವರದಿ ತಯಾರಿಸಲಾಗಿದೆ.ಅದರ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು.ಈಗ ಆಯೋಗದ ಅಧ್ಯಕ್ಷರನ್ನು ವಜಾ ಮಾಡಲಾಗಿದೆ.ಸದಸ್ಯ ಕಾರ್ಯದರ್ಶಿ ಇದ್ದಾರೆ.ಅವರಿಂದ ವರದಿ ಪಡೆದು ತೀರ್ಮಾನ ತೆಗೆದುಕೊಳ್ಳಬಹುದು.ಈ ಹಿಂದಿನ ಸರ್ಕಾರಗಳು ವರದಿಯನ್ನು ನಿರ್ಲಕ್ಷಿಸಿದ್ದು ಅಕ್ಷಮ್ಯ.ಮುಖ್ಯಮಂತ್ರಿಗಳು ವರದಿ ಸ್ವೀಕರಿಸಲು ನಿರಾಕರಿಸಿದ್ದರೆ, ನೇರವಾಗಿ ರಾಜ್ಯಪಾಲರಿಗೆ ಸಲ್ಲಿಸಲು ಅವಕಾಶವಿತ್ತು.ನಾನು ಆಯೋಗದ ಅಧ್ಯಕ್ಷನಾಗಿದ್ದಾಗ ರಾಜ್ಯಪಾಲರಿಗೆ ನೇರವಾಗಿ ವರದಿ ನೀಡಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದೆ ಎಂದು ಹೇಳಿದ್ದಾರೆ.

ವಿವಾದ ಹುಟ್ಟುಹಾಕುವ ಸರ್ಕಾರ:
ಜಾತಿಯಂತಹ ಸೂಕ್ಷ್ಮ ವಿಚಾರಗಳಲ್ಲಿ ಸರ್ಕಾರಗಳು ಗೊಂದಲದ ನಿರ್ಧಾರಗಳನ್ನು ತೆಗೆದುಕೊಂಡು ಜಾತಿ, ಜಾತಿಗಳ ನಡುವೆ ದ್ವೇಷ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿವೆ.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಚಿಸಲಾಗಿದ್ದ ಸದಾಶಿವ ಆಯೋಗದ ವರದಿ, ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದ ಜಾತಿ ಜನಗಣತಿ ವರದಿ ಸೇರಿದಂತೆ ಎರಡೂ ಕೂಡ ಸಾರ್ವಜನಿಕವಾಗಿ ಲಭ್ಯವಾಗಿಲ್ಲ. ಅಧಿಕೃತವಾಗಿ ಅಂಗೀಕಾರವೂ ಆಗಿಲ್ಲ, ತಿರಸ್ಕಾರವೂ ಆಗಿಲ್ಲ. ಆದರೆ ಹಲವು ವಿವಾದಗಳನ್ನು ಮಾತ್ರ ಹುಟ್ಟುಹಾಕಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ