ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ವಾಗ್ವಾದ

ಮೈಸೂರು, ಸೆ.29- ತಪಾಸಣೆ ನೆಪದಲ್ಲಿ ತಮ್ಮನ್ನು ತಡೆದರು ಎಂಬ ಕಾರಣಕ್ಕಾಗಿ ಸಿಟ್ಟಾದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಭದ್ರತಾ ಸಿಬ್ಬಂದಿಗಳ ಜತೆ ವಾಗ್ವಾದ ನಡೆಸಿದ ಘಟನೆ ಇಂದು ನಡೆದಿದೆ.

ಮೈಸೂರಿನ ದಸರಾ ಮಹೋತ್ಸವಕ್ಕೆ ಭಾರೀ ಭದ್ರತೆ ಆಯೋಜಿಸಲಾಗಿತ್ತು. ಪ್ರಗತಿಪರರು ಮಹಿಷಾ ದಸರಾ ಆಚರಣೆಗೆ ಮುಂದಾಗಿದ್ದರು. ಅದಕ್ಕೆ ಜಿಲ್ಲಾಡಳಿತ ಅಡ್ಡಿಪಡಿಸಿ ಅವಕಾಶ ನಿರಾಕರಿಸಿತ್ತು. ಅದನ್ನು ವಿರೋಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲಾ ಗಣ್ಯರಿಗೂ ಘೇರಾವ್ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ, ಮೂವರು ಡಿಸಿಎಂಗಳು, ಕೇಂದ್ರ ಸಚಿವರು ಹಾಗೂ ರಾಜ್ಯ ಸಂಪುಟದ ಎಲ್ಲಾ ಸಚಿವರು ದಸರಾದಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ದಸರಾಗೆ ಭಾರೀ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡರು ಸ್ವಲ್ಪ ತಡವಾಗಿ ದಸರಾಗೆ ಆಗಮಿಸಿದ್ದರು. ಕಾರು ಇಳಿದು ವೇದಿಕೆ ಕಾರ್ಯಕ್ರಮದತ್ತ ಬರುವಾಗ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದರು. ಇದರಿಂದ ಸಿಟ್ಟಾದ ಕೇಂದ್ರ ಸಚಿವರು ಪೊಲೀಸರ ಜತೆ ವಾಗ್ವಾದ ನಡೆಸಿದರು. ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾಪಸ್ ತೆರಳಲು ಮುಂದಾದರು.

ತಕ್ಷಣವೇ ಅಲ್ಲಿದ್ದ ಸಿಎಂ ಆಪ್ತ ಸಂತೋಷ್ ಮತ್ತು ಶಾಸಕ ನಾಗೇಂದ್ರ ಅವರು ಸದಾನಂದಗೌಡರನ್ನು ಸಮಾಧಾನಪಡಿಸಿ ವೇದಿಕೆಗೆ ಕರೆದುಕೊಂಡು ಹೋದರು. ಆದರೂ ಸ್ವಲ್ಪ ಸಮಯ ಇದ್ದು, ಅರ್ಧ ಕಾರ್ಯಕ್ರಮದಲ್ಲೇ ನಿರ್ಗಮಿಸಿದರು.

ಭದ್ರತೆ ನೆಪದಲ್ಲಿ ಮುಜುಗರ ಉಂಟಾಗಿದ್ದರಿಂದ ಸಿಟ್ಟಿನಿಂದ ಕುದಿಯುತ್ತಿದ್ದ ಸದಾನಂದಗೌಡ ಅವರು ಕೊನೆಗೆ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನವನ್ನೂ ಪಡೆಯದೆ ನಿರ್ಗಮಿಸಿದರು ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ