ಬಳ್ಳಾರಿ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಬಿಜೆಪಿ ತೆಕ್ಕೆಗೆ; ಕುತೂಹಲ ಮೂಡಿಸಿದ ಬಿಎಸ್​ವೈ -ಯು.ಟಿ. ಖಾದರ್ ರಹಸ್ಯ ಭೇಟಿ

ಬಳ್ಳಾರಿ: ಕಾಂಗ್ರೆಸ್​-ಜೆಡಿಎಸ್ ಪಕ್ಷದ ಹಲವು ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಿದ ನಂತರ ಎರಡೂಪಕ್ಷದಲ್ಲಿ ಭಿನ್ನಮತ ಹೆಚ್ಚಾಗಿದೆ. ಅನರ್ಹ ಶಾಸಕರು ತಮ್ಮ ಪ್ರಕರಣದ ತೀರ್ಪು ಹೊರಬಿದ್ದ ಕೂಡಲೆ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಇನ್ನೊಂದೆಡೆ ಜೆಡಿಎಸ್ಪಕ್ಷದಲ್ಲಿ ಜಿ.ಟಿ. ದೇವೇಗೌಡ, ಎಸ್​.ಆರ್. ಶ್ರೀನಿವಾಸ್ಸೇರಿದಂತೆ ಕೆಲವು ನಾಯಕರು ಒಂದು ಕಾಲನ್ನು ಬಿಜೆಪಿಯಲ್ಲಿಟ್ಟಾಗಿದೆ. ನಡುವೆ ಕಾಂಗ್ರೆಸ್ನಲ್ಲಿ ಕೂಡ ಭಿನ್ನಮತ ಹೆಚ್ಚಾಗುತ್ತಿದೆ. 

ಆಪರೇಷನ್​ ಕಮಲ ನಡೆಸಿ ಕಾಂಗ್ರೆಸ್​ ಶಾಸಕರನ್ನು ಮುಂಬೈ ಹೋಟೆಲ್​ನಲ್ಲಿರಿಸಿರುವ ಬಿಜೆಪಿ ಕೈ ಶಾಸಕರಿಗೆ ಕೋಟಿಗಟ್ಟಲೆ ಹಣ ನೀಡಿದೆ ಎಂದು ಆಕ್ರೋಶ ಹೊರಹಾಕಿದ್ದ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಇದೀಗ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಈ ಮೂಲಕ ಅನಿಲ್ ಲಾಡ್​ ಅವರಿಂದಲೇ ಕಾಂಗ್ರೆಸ್​ನಲ್ಲಿ ಮತ್ತೊಮ್ಮೆ ರಾಜೀನಾಮೆ ಪರ್ವ ಆರಂಭವಾಗುವ ಸಾಧ್ಯತೆಯಿದೆ. ಈ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಮಂಗಳೂರು ಶಾಸಕ ಯು.ಟಿ. ಖಾದರ್ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಳ್ಳಾರಿ ಕಾಂಗ್ರೆಸ್​ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರಲು ನಿರ್ಧರಿಸಿದ್ದು, ಈ ಬಗ್ಗೆ ತಮ್ಮ ಕಾರ್ಯಕರ್ತರಿಗೆ ಮೆಸೇಜ್ ಕಳಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರಲು ಯೋಚಿಸಿದ್ದೇನೆ. ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಅನಿಲ್ ಲಾಡ್ ಕಾರ್ಯಕರ್ತರಿಗೆ ಮೆಸೇಜ್ ಮಾಡಿದ್ದಾರೆ. ಕಾಂಗ್ರೆಸ್​ ಕಾರ್ಯಕರ್ತರಿರುವ ಬ್ರೂಸ್ಪೇಟೆ ಬ್ಲಾಕ್ ಕಾಂಗ್ರೆಸ್ ವಾಟ್ಸಾಪ್​ ಗ್ರೂಪ್​ಗೆ ಅನಿಲ್ ಲಾಡ್ ಮೆಸೇಜ್ ಕಳುಹಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಬಳ್ಳಾರಿಯ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಬಿಜೆಪಿ ಸೇರುವುದು ಖಚಿತ ಎನ್ನಲಾಗುತ್ತಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಅನಿಲ್ ಲಾಡ್ ಬಿಜೆಪಿ ಸೇರಲಿದ್ದಾರೆ. ಈ ಬಗ್ಗೆ ನ್ಯೂಸ್​18ಗೆ ಖಚಿತಪಡಿಸಿರುವ ಅನಿಲ್ ಲಾಡ್​, ಸೋಮವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದೇನೆ.  ಈಗಾಗಲೇ ಈ ಬಗ್ಗೆ ಸಚಿವ ಶ್ರೀರಾಮುಲು ಅವರ ಜೊತೆ ಚರ್ಚೆ ನಡೆಸಿದ್ದೇನೆ. ಯಾವುದೇ ಷರತ್ತುಗಳಿಲ್ಲದೆ ಬಿಜೆಪಿ ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್​ನಲ್ಲಿರುವ ಹಲವು ಬಣಗಳಿಂದ ಬೇಸರಗೊಂಡು ಪಕ್ಷ ತೊರೆಯುವ ನಿರ್ಧಾರ ಮಾಡಿರುವುದಾಗಿ ತಿಳಿಸಿರುವ ಅನಿಲ್ ಲಾಡ್, ಶಾಸಕ, ಎಂಎಲ್​ಸಿ ಪದವಿಯ ಆಸೆಗಾಗಿ ಬಿಜೆಪಿ ಸೇರುತ್ತಿಲ್ಲ. ಬಿಜೆಪಿ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್​ನಲ್ಲಿ ಮತ್ತೊಮ್ಮೆ ಅಸಮಾಧಾನ ಭುಗಿಲೆದ್ದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ