ನವದೆಹಲಿ: ರಾಜ್ಯದ 17 ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಆರಂಭಗೊಂಡಿದೆ. ಇಂದು ಸುಪ್ರೀಂ ನೀಡುವ ತೀರ್ಪು ಬಹಳ ಮಹತ್ವದ್ದಾಗಿದೆ. ಅಷ್ಟೇ ಅಲ್ಲ, ಅನರ್ಹ ಶಾಸಕರ ಭವಿಷ್ಯವನ್ನು ಇದು ನಿರ್ಧಾರ ಮಾಡಲಿದೆ.
ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದರು. ಇದಾದ ಬೆನ್ನಲ್ಲೇ ಅಂದಿನ ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದರಿಂದ ವಿಚಲಿತರಾದ ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅನರ್ಹರ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಈ ವೇಳೆ, “ಅನರ್ಹರು ರಾಜೀನಾಮೆ ನೀಡಿದ್ದಾರೆ. ಆದರೂ ಅನರ್ಹತೆ ಮಾಡಲಾಗಿದೆ. ಈಗ ಚುನಾವಣೆ ಘೋಷಣೆ ಆಗಿದೆ. ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್ 30 ಕೊನೆಯ ದಿನ. ಈಗಾಗಲೇ ರಾಜೀನಾಮೆ ನೀಡಿ 8 ವಾರ ಆಗಿದೆ. ಹೀಗಾಗಿ ತುರ್ತಾಗಿ ಅರ್ಜಿ ಇತ್ಯರ್ಥಪಡಿಸಿ.
ಚುನಾವಣೆ ಅಧಿಸೂಚನೆಗೆ ತಡೆ ನೀಡಬೇಕು. ಸಾಮಾಜಿಕ ನ್ಯಾಯವನ್ನ ಸ್ಪೀಕರ್ ಅನುಸರಿಸಿಲ್ಲ,” ಎಂದರು ಅವರು. ಮುಂದುವರೆದು, “ಕೋರ್ಟ್ವಿನಾಯಿತಿ ನೀಡಿದ್ದರಿಂದ ಶಾಸಕರು ಸದನಕ್ಕೆ ಹೋಗಲಿಲ್ಲ. ಇದು ವಿಪ್ ಉಲ್ಲಂಘನೆ ಆಗುವುದಿಲ್ಲ. ಸ್ಪೀಕರ್ ನೋಟಿಸ್ ನೀಡದೇ ಅನರ್ಹ ಮಾಡಿದ್ದಾರೆ. ಕನಿಷ್ಠ 7 ದಿನ ಕಾಲಾವಕಾಶ ನೀಡಿ ಶಾಸಕರ ವಾದ ಕೇಳಬೇಕಾಗಿತ್ತು. ರಾಜೀನಾಮೆ ಸ್ವಯಂ ಪ್ರೇರಿತವಾಗಿದ್ದರೆ ಸಾಕು. ಆದರೆ, ಸ್ಪೀಕರ್ ಬೇರೆ ಕಾರಣ ನೀಡಿ ಅನರ್ಹಗೊಳಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ಕೊಡಿ. ಯಾರ ಸ್ಪರ್ಧೆಗೂ ಅವಕಾಶ ನಿರಾಕರಿಸುವಂತಿಲ್ಲ,” ಎಂದು ನ್ಯಾಯಾಧೀಶರ ಎದುರು ಮುಕುಲ್ ರೋಹ್ಟಗಿ ಮನವಿ ಮಾಡಿದರು.
ಅನರ್ಹರ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸುವುದು ಬೇಡ ಎಂದು ಕೋರಿದ ಅವರು, “ಅಪರೂಪದ ಪ್ರಕರಣಗಳಲ್ಲಿ ಚುನಾವಣೆಗೆ ತಡೆ ನೀಡಲಾಗಿದೆ. 2015ರಲ್ಲಿ ಹೈದರಾಬಾದ್ ಹೈಕೋರ್ಟ್ ಕೂಡ ತಡೆ ನೀಡಿತ್ತು. ಹೀಗಾಗಿ 15 ಕ್ಷೇತ್ರಗಳ ಬೈ ಎಲೆಕ್ಷನ್ಗೆ ತಡೆ ನೀಡಿ. 361/b ಪ್ರಕಾರ ಅನರ್ಹರು ಲಾಭದಾಯಕ ಹುದ್ದೆ ಹೊಂದುವಂತಿಲ್ಲ. 361/bಯಲ್ಲಿ ಮರು ಆಯ್ಕೆ ವಿಷಯದ ಬಗ್ಗೆ ಉಲ್ಲೇಖ ಇಲ್ಲ. ರಾಜೀನಾಮೆ ನಂತರ ಪಕ್ಷ ಬದಲಾವಣೆಗೂ ಅಭ್ಯಂತರವಿಲ್ಲ. 361/b ವಿಧಿಯಲ್ಲಿ ಪಕ್ಷಾಂತರದ ಬಗ್ಗೆ ಉಲ್ಲೇಖವಿಲ್ಲ,” ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
“ಸುಪ್ರೀಂಕೋರ್ಟ್ ಕೂಡ ಮೊದಲು ರಾಜೀನಾಮೆ ಅಂಗಿಕಾರಕ್ಕೆ ಸೂಚಿಸಿತ್ತು, ಸ್ಪೀಕರ್ 2023ರವರೆಗೆ ಸ್ಪರ್ಧಿಸುವಂತಿಲ್ಲ ಎಂದಿರುವುದರಿಂದ ಚುನಾವಣೆಗೆ ತಡೆ ಕೇಳುತ್ತಿದ್ದೇನೆ. ಅನರ್ಹಗೊಳಿಸಿದ್ದನ್ನು ಕೋರ್ಟ್ ನಲ್ಲಿ ಪ್ರಶ್ನಿಸಿರುವ ಅರ್ಜಿ ಬಾಕಿ ಇದೆ. ಈ ಮಧ್ಯೆಯೇ ಚುನಾವಣೆ ಘೋಷಣೆ ಆಗಿದೆ. ಸ್ಪರ್ಧೆಯಿಂದ ಅನರ್ಹರು ವಂಚಿತಗೊಳ್ಳಬಾರದು. ಹಾಗಾಗಿ ಚುನಾವಣೆಗೆ ತಡೆ ನೀಡಿ,” ಎಂದು ರೋಹ್ಟಗಿ ಹೇಳಿದರು.
ಸುಪ್ರೀಂ ಕೋರ್ಟ್ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇದೆ. ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಒಂದು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲ್ಲ. ಇದು ಅನರ್ಹರನ್ನು ಆತಂಕಕ್ಕೆ ಈಡು ಮಾಡಿತ್ತು. ಇಂದಾದರೂ ಸುಪ್ರಿಂನಲ್ಲಿ ತೀರ್ಪು ಬರುವ ನಿರೀಕ್ಷೆಯಲ್ಲಿ ಅನರ್ಹರಿದ್ದಾರೆ.
ಅನರ್ಹ ಶಾಸಕರ ಪ್ರಕರಣದ ವಿಚಾರಣೆಯನ್ನು ನ್ಯಾ| ಮೋಹನ್ ಶಾಂತನಗೌಡರ ನಡೆಸಬೇಕಿತ್ತು. ಆದರೆ, ಅವರು ಕರ್ನಾಟಕ ಮೂಲದವರು ಮತ್ತು ಅನರ್ಹ ಶಾಸಕ ಬಿಸಿ ಪಾಟೀಲ್ ಅವರ ದೂರದ ಸಂಬಂಧಿ. ಹೀಗಾಗಿ ಸ್ವಇಚ್ಛೆಯಿಂದ ಅವರು ವಿಚಾರಣೆಯಿಂದಲೇ ಹಿಂದೆ ಸರಿದಿದ್ದರು. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಕೃಷ್ಣ ಮುರಳಿ, ಸಂಜಯ್ ಖನ್ನಾ ನಡೆಸುತ್ತಿದ್ದಾರೆ.