ಒಂದೇ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಯಡಿಯೂರಪ್ಪ

ಬೆಂಗಳೂರು,ಸೆ.19- ಬಹುದಿನಗಳ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದ ಪ್ರಸಂಗ ಇಂದು ನಡೆಯಿತು.

ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಇಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ  ಹಾಗೂ ಕರ್ನಾಟಕ ರಾಜ್ಯ ಎಸ್ಸಿಎಸ್ಟಿ ಎಂಟರಪ್ರೆನರ್ಸ್, ಇಂಡಿಸ್ಟ್ರೀಯಲ್ ಅಸೋಸಿಯೇಷನ್  ಜಂಟಿ ಆಶ್ರಯದಲ್ಲಿ  ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಸವಲತ್ತುಗಳ ಕುರಿತ ಮಾಹಿತಿ ಇರುವ ಪುಸ್ತಕ ಬಿಡುಗಡೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ನೆರವೇರಿಸಿದರು.

ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ಯಡಿಯೂರಪ್ಪ ಆಗಮಿಸಿದರೆ , ಸಿದ್ದರಾಮಯ್ಯ ತುಸು ತಡವಾಗಿಯೇ ಆಗಮಿಸಿದರು.

ವೇದಿಕೆಗೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಖುದ್ದು ಯಡಿಯೂರಪ್ಪನವರೇ ಎದ್ದು ನಿಂತು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ಇನ್ನು ಸಮಾರಂಭದಲ್ಲಿ  ಯಡಿಯೂರಪ್ಪ ಮಾತನಾಡುವ ವೇಳೆ ಅವರ ಬೆಂಬಲಿಗರು ಶಿಳ್ಳೆ ಹೊಡೆದು ಜೈಕಾರ ಹಾಕಿದರೆ ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಬೆಂಬಲಿಗರು ಕೂಡ ತಾವೇನು ಕಮ್ಮಿ ಎಂಬಂತೆ ತಮ್ಮ ನಾಯಕರಿಗೆ ಜೈಕಾರ  ಹಾಕುವುದನ್ನು ಮರೆಯಲಿಲ್ಲ.

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆ  ಹಂಚಿಕೊಂಡಿದ್ದು, ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ