ನೆರೆ ರಾಷ್ಟ್ರಗಳಿಂದ ಎದುರಾಗುತ್ತಿರುವ ಆತಂಕ ಹಿನ್ನಲೆ-ಮೂರು ಸೇನಾ ಪಡೆಗಳನ್ನು ಬಲವರ್ಧನೆಗೆ ಕೇಂದ್ರದಿಂದ ಕ್ರಮ- ರಕ್ಷಣಾ ಸಚಿವ ರಾಜನಾಥ್‍ಸಿಂಗ್

ನವದೆಹಲಿ, ಸೆ.18- ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾದಿಂದ ಭಾರತಕ್ಕೆ ಪದೇ ಪದೇ ಎದುರಾಗುತ್ತಿರುವ ಆತಂಕಗಳ ಹಿನ್ನೆಲೆಯಲ್ಲಿ ಭಾರತದ ಮೂರು ಸೇನಾ ಪಡೆಗಳನ್ನು ಬಲವರ್ಧನೆಗೊಳಿಸಲು ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ.

ರಕ್ಷಣಾ ಉತ್ಪಾದನೆ 2025 ರ ವೇಳೆಗೆ 26 ಶತಕೋಟಿ ಡಾಲರ್ ಗುರಿ ತಲುಪಲು ಶೇ.15ರಷ್ಟು ಪ್ರಗತಿ ಸಾಧಿಸಬೇಕಿದೆ ಎಂದು ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಹೇಳಿದ್ದಾರೆ.

ಭಾರತೀಯ ರಕ್ಷಣಾ ತಯಾರಕರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, 26 ಶತಕೋಟಿ ಡಾಲರ್ ರಕ್ಷಣಾ ಕೈಗಾರಿಕೆ ಹೊಂದಲು ಉತ್ಪಾದನೆ ಶೇ.15 ರಷ್ಟು ಹೆಚ್ಚಬೇಕು ಎಂದಿದ್ದಾರೆ.

ರಕ್ಷಣಾ ಉತ್ಪನ್ನ ತಯಾರಕರಿಗೆ ನೀತಿ ನಿರೂಪಣೆಗಳಿಂದಾಗಿ ಯಾವುದೇ ತೊಂದರೆಯಾಗಿದ್ದಲ್ಲಿ ಅದನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡಿದರು. ಸರ್ಕಾರ ಹೊಸ ಆಲೋಚನೆಗೆ ಮುಕ್ತವಾಗಿದ್ದು ಎಲ್ಲ ಲಭ್ಯ ಶಕ್ತಿ ಸಂಪನ್ಮೂಲಗಳನ್ನು ರಕ್ಷಣಾ ವಲಯದಲ್ಲಿ ಸಮರ್ಥವಾಗಿ ಬಳಸಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಭಾರತದ ಭೂ ಸೇನೆ, ವಾಯು ಪಡೆ ಮತ್ತು ನೌಕಾ ದಳಗಳನ್ನು ಸದೃಢಗೊಳಿಸಲು ಈಗಾಗಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಮರ ವಿಮಾನಗಳು, ಯುದ್ಧ ಜಲಾಂತರ್ಗಾಮಿಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿರುವ ಭಾರತ ರಕ್ಷಣಾ ಸಾಧನಗಳ ಉತ್ಪಾದನೆಗೆ ಆದ್ಯತೆ ನೀಡುತ್ತಿರುವುದು ಪ್ರಸ್ತುತ ಸನ್ನಿವೇಶದಲ್ಲಿ ಗಮನಾರ್ಹ ಸಂಗತಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ