ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಸುರಕ್ಷಿತ,​ ಸಂಪರ್ಕಿಸಲು ಇಸ್ರೋ ಸತತ ಪ್ರಯತ್ನ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಭಾರತವನ್ನು ತಿರುಗಿ ನೋಡುವಂತೆ ಮಾಡಿದ ಇಸ್ರೋ ಚಂದ್ರಯಾನ – 2, ಕಡೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಆದರೆ ಚಂದ್ರಯಾನ್​ – 2 ಲ್ಯಾಂಡರ್​ ‘ವಿಕ್ರಂಇದೀಗ ಸುಸ್ಥಿತಿಯಲ್ಲಿದೆ ಎಂಬ ಮಾಹಿತಿಯನ್ನು ಇಸ್ರೋ ನೀಡಿದೆ

ಈ ಮೂಲಕ ಲ್ಯಾಂಡರ್​ ವಿಕ್ರಂ ಜತೆ ಸಂಪರ್ಕ ಸಾಧಿಸುವ ಇಸ್ರೋ ಪ್ರಯತ್ನಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಂತಾಗಿದೆ. 2.1 ಕಿಲೋಮೀಟರ್​ ದೂರದಲ್ಲಿದ್ದಾಗ, ವಿಕ್ರಂ ಸಂಪರ್ಕವನ್ನು ಕಳೆದುಕೊಂಡಿತ್ತು. ಇದರಿಂದ ಇಸ್ರೋ ವಿಜ್ಞಾನಿಗಳಿಗೆ ಮತ್ತು ದೇಶದ ಜನರಿಗೆ ಭಾರೀ ನಿರಾಸೆ ಉಂಟಾಗಿತ್ತು. ಆದರೆ ಸಂತಸದ ವಿಚಾರವೆಂದರೆ ವಿಕ್ರಂಗೆ ಯಾವುದೇ ರೀತಿಯಾದ ಹಾನಿಯಾಗಿಲ್ಲ. ವಾಲಿದ ಸ್ಥಿತಿಯಲ್ಲಿದ್ದರೂ ವಿಕ್ರಂಗೆ ಡ್ಯಾಮೇಜ್​ಗಳಾಗಿಲ್ಲ. ಸುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಇಸ್ರೋ ತಂತ್ರಜ್ಞರು ವಿಕ್ರಂ ಜತೆ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನದಲ್ಲಿದ್ದಾರೆ.

ಭಾನುವಾರ ಆರ್ಬಿಟರ್​, ವಿಕ್ರಂ ಲ್ಯಾಂಡರ್​ ಚಿತ್ರಗಳನ್ನು ಸೆರೆಹಿಡಿದು ಇಸ್ರೋಗೆ ಮಾಹಿತಿ ರವಾನಿಸಿತ್ತು. ಇಲ್ಲಿಂದ ಇಸ್ರೋ ತಂತ್ರಜ್ಞರಲ್ಲಿಯೂ ವಿಕ್ರಂ ಜತೆ ಮತ್ತೆ ಸಂಪರ್ಕ ಸಾಧಿಸುವ ಕೌತುಕತೆ ಮನೆ ಮಾಡಿತ್ತು. ಇದೀಗ ವಿಕ್ರಂ ಜತೆ ಸಂಪರ್ಕ ಸಾಧಿಸುವ ಸಾಧ್ಯತೆಗೆ ಮತ್ತೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ ಎಂದರೆ ತಪ್ಪಾಗಲಾರದು.
ಈ ಬಗ್ಗೆ ಸೋಮವಾರವೇ ನ್ಯೂಸ್​18ಗೆ ಇಸ್ರೋ ಮೂಲಗಳು ಮಾಹಿತಿ ನೀಡಿತ್ತು. ಇದೀಗ ಇಸ್ರೋ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲೂ ವಿಕ್ರಂ ಜತೆ ಸಂಪರ್ಕ ಸಾಧಿಸಲು ಸತತವಾಗಿ ಯತ್ನಿಸುತ್ತಿರುವುದಾಗಿ ತಿಳಿಸಿದೆ.

“ಚಂದ್ರಯಾನ್​ – 2 ಆರ್ಬಿಟರ್​ ವಿಕ್ರಂ ಲ್ಯಾಂಡರ್​ನ್ನು ಚಂದ್ರನ ಅಂಗಳದಲ್ಲಿ ಪತ್ತೆ ಹಚ್ಚಿದೆ. ಆದರೆ ಇದುವರೆಗೂ ಸಂಪರ್ಕ ಸಾಧಿಸಲು ಆಗಿಲ್ಲ. ಆದರೆ ಇಸ್ರೋ ಸಂಪರ್ಕ ಸಾಧಿಸಲು ಸಕಲ ಯತ್ನಗಳನ್ನೂ ಮಾಡುತ್ತಿದೆ,” ಎಂದು ಇಸ್ರೋ ಟ್ವೀಟ್​ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ