ಉಕ್ಕಿ ಹರಿಯುವುತ್ತಿರುವ ಲಕ್ಷ್ಮಣ ತೀರ್ಥ ನದಿ

ಹುಣಸೂರು, ಸೆ.3- ಪ್ರವಾಹದಿಂದ ಜೀವ ನದಿ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಭಾರೀ ಪ್ರಮಾಣದ ಹಾನಿಯಾಗಿದೆ.

ಮನೆಗಳ ಜತೆಗೆ ರಸ್ತೆಗಳು, ಸೇತುವೆಗಳು ಕುಸಿದು ಹೋಗಿದ್ದು, ತಾಲ್ಲೂಕಿನಾದ್ಯಂತ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ನದಿ ಪಾತ್ರದ ಹನಗೋಡು ಹೋಬಳಿಯಲ್ಲಿ ಹೆಚ್ಚು ಹಾನಿಯಾಗಿದ್ದರೆ ಬಿಳಿಕೆರೆ, ಕಸಬಾ ಮತ್ತು ಗಾವಡಗೆರೆ ಹೋಬಳಿಗಳಲ್ಲೂ ವಿವಿಧೆಡೆ ಸೇತುವೆ, ರಸ್ತೆಗಳು ಕಿತ್ತು ಹೋಗಿವೆ.

ಒಟ್ಟಾರೆ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಸೇತುವೆ, 70 ಕಿ.ಮೀ. ರಸ್ತೆ ಹದಗೆಟ್ಟು ಹೋಗಿದೆ.ಸದ್ಯ ಇನ್ನೂ ನೆರೆ ಪರಿಹಾರ ಬಿಡುಗಡೆಯಾಗದಿರುವುದರಿಂದ ದುರಸ್ತಿ ಕಾರ್ಯ ನಡೆಯುತ್ತಿಲ್ಲ.

ಅಪಾಯದಲ್ಲಿ ಕೊಳುವಿಗೆ ಸೇತುವೆ: ಹನಗೋಡು , ಕೊಳವಿಗೆ ಬಳಿ ನದಿಗೆ ನಿರ್ಮಿಸಿರುವ ಸೇತುವೆಗಳು ಶಿಥಿಲಗೊಂಡಿದ್ದು ವಾಹನ ಸಂಚಾರ ರದ್ದುಪಡಿಸಲಾಗಿದೆ.

ಸೇತುವೆ ಪಿಲ್ಲರ್ ಅಪಾಯದಲ್ಲಿ: ಇನ್ನು ನಗರಕ್ಕೆ ಸಮೀಪದ ಹನಗೋಡು ರಸ್ತೆಯ ರಾಮೇನಹಳ್ಳಿ ಬಳಿ ನದಿಗೆ ನಿರ್ಮಿಸಿದ್ದ ಸೇತುವೆಯ ಒಂದು ಬದಿ ಮಣ್ಣನ್ನು ಹೊತ್ತೊಯ್ದಿದೆ. ರಾಮಪಟ್ಟಣ ಬಳಿಯ ಸೇತುವೆ ರಸ್ತೆಯ ತಡೆಗೋಡೆ ಬಿದ್ದು ಹೋಗಿದೆ.

10 ಕಿರು ಸೇತುವೆಗೆ ಹಾನಿ: ಹುಣಸೂರು-ಕೆ.ಆರ್.ನಗರ ರಸ್ತೆಯ ಶನಿದೇವರ ದೇವಾಲಯದ ಹತ್ತಿರ ಕಿರು ಸೇತುವೆ ಹಾನಿಗೊಳಗಾಗಿದ್ದು, ಸಂಚಾರ ಬಂದ್ ಆಗಿದೆ.

ನಾಗನಹಳ್ಳಿ-ತಿಪ್ಪಲಾಪುರ ಮಾರ್ಗ ಬಳಸುದಾರಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ನಿಲುವಾಗಿಲಿನ ಅವಲಕ್ಕಿಕಡದ ಮೋರಿ, ಭಾರತವಾಡಿ-ದೊಡ್ಡಹೆಜ್ಜೂರು ರಸ್ತೆಯ ಕೆರೆ ಏರಿಯ ಮೋರಿ ಸೇರಿದಂತೆ ಅನೇಕ ಕಡೆಗಳಲ್ಲಿ ಹಾನಿಯಾಗಿದೆ.10ಕ್ಕೂ ಹೆಚ್ಚು ಸೇತುವೆಗಳು ಹಾನಿಯಾಗಿವೆ.

70 ಕಿ.ಮೀ. ರಸ್ತೆ ಹಾನಿ: ಸುಮಾರು 70 ಕಿ.ಮೀ. ರಸ್ತೆಗಳು ಹಾಳಾಗಿದ್ದು, ಹನಗೋಡು ಭಾಗದ ಕೋಣನಹೊಸಳ್ಳಿ ಗ್ರಾಮದ ಎಲ್ಲಾ ರಸ್ತೆಗಳನ್ನು ಕೊಚ್ಚಿ ಹೋಗಿದ್ದರೆ, ಕೊಳುವಿಗೆ, ಬಿಲ್ಲೇನಹೊಸಳ್ಳಿ, ಕೆ.ಜಿ.ಹಬ್ಬನಕುಪ್ಪೆ, ನೇಗತ್ತೂರು, ಅಬ್ಬೂರು, ಕಾಮಗೌಡನಹಳ್ಳಿ ಗೇm, ಕಲ್ಲೂರಪ್ಪನ ಬೆಟ್ಟದ ರಸ್ತೆ, ಹರಳಹಳ್ಳಿ ರಸ್ತೆ, ಗಾವಡಗೆರೆ ಹೋಬಳಿಯ ಹುಲ್ಯಾಳು ರಸ್ತೆ, ಬಿಳಿಕೆರೆ ಹೋಬಳಿಯ ಚಿಕ್ಕಬೀಚನಹಳ್ಳಿ ರಸ್ತೆಗಳು ಹದಗೆಟ್ಟಿವೆ.

ಅನುದಾನ ಬಿಡುಗಡೆಯಾದರೆ ತಕ್ಷಣ ಕಾಮಗಾರಿ: ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 60 ಕಿ.ಮೀ. ರಸ್ತೆ ಹಾನಿಯಾಗಿದೆ.ಎರಡು ಮೋರಿ, ಒಂದು ಸೇತುವೆಯ ತಡೆಗೋಡೆಗೆ ಧಕ್ಕೆಯಾಗಿದ್ದು, ಇವುಗಳ ದುರಸ್ತಿಗಾಗಿ 3.84 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಲಾಗಿದೆ.ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ತಾಲೂಕಿನಲ್ಲಿ ಪ್ರವಾಹದ ಹಾನಿಯಿಂದಾಗಿರುವ ರಸ್ತೆ-ಸೇತುವೆ ಮತ್ತಿತರ ಹಾನಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮಾಹಿತಿ ನೀಡಲಾಗಿದೆ. ಹಣ ಬಿಡುಗಡೆಯಾದ ನಂತರ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ವೀಣಾ ಭರವಸೆ ನೀಡಿದ್ದಾರೆ.

ಪ್ರಸ್ತಾವನೆ: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ನಾಲ್ಕು ದೊಡ್ಡ ಸೇತುವೆ, ಹತ್ತಕ್ಕೂ ಹೆಚ್ಚು ಕಿರು ಸೇತುವೆಗಳು, 9 ಕಿ.ಮೀ.ಗೂ ಹೆಚ್ಚು ರಸ್ತೆ ಹಾಳಾಗಿದೆ. ಹನಗೋಡು ಸೇತುವೆ ಬಳಿಯ ರಸ್ತೆ ಸೇರಿದಂತೆ ಅಗತ್ಯವಿರುವ ಕೆಲವೆಡೆ ತುರ್ತು ಕಾಮಗಾರಿ ಮಾತ್ರ ಕೈಗೊಳ್ಳಲಾಗಿದೆ. ರಸ್ತೆ ಹಾಗೂ ಸೇತುವೆ ದುರಸ್ತಿ ಕಾರ್ಯಕ್ಕೆ 7.5 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ಈ ಹಿಂದೆ ಸುರಿದಿದ್ದ ಭಾರೀ ಮಳೆಗೆ 9 ಕಿ.ಮೀ ರಸ್ತೆಹಾನಿಯಾಗಿತ್ತು. ಈ ರಸ್ತೆಗಳ ದುರಸ್ತಿಗೆ 75 ಲಕ್ಷ ರೂ.ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣಪ್ಪ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ