ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಇರಬೇಕು-ಮಾಜಿ ಶಾಸಕ ವೈ.ಎಸ್.ವಿ.ದತ್ತ

ಬೆಂಗಳೂರು, ಆ.31- ನಮ್ಮ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಇರಬೇಕೆಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ.
ನಮ್ಮ ನಾಡಧ್ವಜ, ನಾಡಗೀತೆ, ನಮ್ಮ ಸಂವಿಧಾನದ ಆಶಯಕ್ಕೆ ಪೂರಕವೇ ಹೊರತು ಮಾರಕವಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಡಧ್ವಜ ಇರಬೇಕೆಂಬುದು ಸಂವಿಧಾನದ ವಿರೋಧಿಯಲ್ಲ. ನಮ್ಮ ಸಂವಿಧಾನವೇ ಹೇಳುವಂತೆ ನಮ್ಮ ದೇಶವು ರಾಜ್ಯಗಳ ಒಕ್ಕೂಟ.ರಾಜ್ಯಗಳಿಗೆ ಭಾಷೆ ಮತ್ತು ಸಂಸ್ಕøತಿ ತಳಹದಿಯಾಗಿದ್ದು, ಬಹುತ್ವವನ್ನು ಒಪ್ಪಿಕೊಂಡಿರುವ ನಮ್ಮ ಸಾಂವಿಧಾನಿಕ-ಜನತಂತ್ರ ವ್ಯವಸ್ಥೆಯಲ್ಲಿ ನಮ್ಮ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಹಕ್ಕು ನಮಗಿದೆ ಎಂದು ಹೇಳಿದ್ದಾರೆ.

ಆಂತರಿಕ ಪ್ರಜಾಪ್ರಭುತ್ವವಿಲ್ಲ: ಎಲ್ಲ ಪಕ್ಷಗಳೂ ಹೈಕಮಾಂಡ್ ಕಪಿಮುಷ್ಟಿಯಲ್ಲಿ ಸಿಲುಕಿದ್ದು, ಆಂತರಿಕ ಪ್ರಜಾಪ್ರಭುತ್ವ ಇಲ್ಲವೇ ಇಲ್ಲ. ಈ ಪಕ್ಷದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ. ಹಾಗಾಗಿ ಇನ್ನೊಂದು ಪಕ್ಷಕ್ಕೆ ನಾನು ಹೋಗುತ್ತಿದ್ದೇನೆ ಎಂದರೆ ಆ ಪಕ್ಷದಲ್ಲೂ ಅದೇ ಹಣೆಬರಹವಿದೆ. ರಾಜಕೀಯವಾಗಿ ಎಲ್ಲಿಯೂ ಸಲ್ಲುವವರಲ್ಲ ಎಂದು ನಿವೃತ್ತರಾಗಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಅವರೊಂದಿಗಿದ್ದು ತಾತ್ವಿಕವಾಗಿ ಭಿನ್ನರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್, ಸುಭಾಷ್‍ಚಂದ್ರಬೋಸ್, ಸಮಾಜವಾದಿ ಕಾಂಗ್ರೆಸ್ ಗುಂಪುಕಟ್ಟಿಕೊಂಡಿದ್ದ ಜಯಪ್ರಕಾಶ್ ನಾರಾಯಣ್, ರಾಮ್‍ಮನೋಹರ್ ಲೋಹಿಯಾ ಅವರು ನಮಗೆ ಸದ್ಯದ ಪರಿಸ್ಥಿತಿಯಲ್ಲಿ ಮಾದರಿಯಾಗಬಹುದೇನೋ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ರಾಜಕೀಯ ಪಕ್ಷದಲ್ಲೂ ಸೈದ್ಧಾಂತಿಕ ಸ್ಪಷ್ಟತೆ, ಬದ್ಧತೆ ಉಳಿದಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಭಿಮಾನ ಇರುವವರು. ಒಂದೇ ಪಕ್ಷದಲ್ಲಿ ಇರುವುದಿಲ್ಲ. ಒಂದೇ ಪಕ್ಷದಲ್ಲಿ ಇರುವುದು ಗುಲಾಮಗಿರಿ ಎಂದು ಹೇಳಿರುವುದನ್ನು ಗಮನಿಸಿದ್ದೇನೆ. ಈಗಾಗಲೇ ಪಕ್ಷಾಂತರ ಪಿಡುಗಿನಿಂದ ಕಲುಷಿತಗೊಂಡಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅತೃಪ್ತರೋ, ಅತಂತ್ರರೋ, ಅನರ್ಹರೋ, ಪಕ್ಷಾಂತರಿಗಳು ಯಾರೇ ಆಗಲಿ ಉಸಿರು ಕಟ್ಟುವ ವಾತಾವರಣ, ಸ್ವಾಭಿಮಾನಕ್ಕೆ ಧಕ್ಕೆ ಎಂಬ ಸೂಕ್ತ ಉತ್ತರದೊಂದಿಗೆ ಸಮರ್ಥಿಸಿಕೊಳ್ಳಲು ಇದು ಸುಲಭದ ರಹದಾರಿಯಾಗಬಹುದು ಎಂದಿದ್ದಾರೆ.
ಸ್ವಾಭಿಮಾನವನ್ನು ಅದುಮಿಟ್ಟುಕೊಂಡು ಒಂದೇ ಪಕ್ಷದಲ್ಲಿ ಗಾಣದ ಎತ್ತಿನಂತೆ ಇರಬೇಕೆಂಬುದು ನನ್ನ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ