ಜ್ಯುವೆಲರಿ ಶಾಪ್‍ನಲ್ಲಿ ದರೋಡೆಕೋರರಿಂದ ಚಿನ್ನಾಭರಣ ದೋಚಲು ಪ್ರಯತ್ನ

ಬೆಂಗಳೂರು, ಆ.21- ಮಟ ಮಟ ಮಧ್ಯಾಹ್ನ ಜ್ಯುವೆಲರಿ ಶಾಪ್‍ಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ ಮೂವರು ದರೋಡೆಕೋರರು ಮಾಲೀಕರು ಪ್ರತಿರೋಧವೊಡ್ಡಿದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ಯಾಲೆಸ್ ಗುಟ್ಟಹಳ್ಳಿ 2ನೆ ಮುಖ್ಯರಸ್ತೆಯ ವಿನಾಯಕ ಸರ್ಕಲ್ ಸಮೀಪವಿರುವ ಸಾಮ್ರಾಟ್ ಜ್ಯುವೆಲರಿ ಶಾಪ್‍ಗೆ ಇಂದು ಮಧ್ಯಾಹ್ನ 2.30ಕ್ಕೆ ಬ್ಲಾಕ್ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಿನ್ನ ಕೊಳ್ಳುವ ನೆಪದಲ್ಲಿ ಮಳಿಗೆಗೆ ಆಗಮಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರ ಚೈನ್ ತೋರಿಸುವಂತೆ ಕೇಳಿ ಮಳಿಗೆಯಲ್ಲಿದ್ದ ಚಿನ್ನಾಭರಣ ದೋಚಲು ಪ್ರಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಮಳಿಗೆ ಮಾಲೀಕ ಆಶಿಶ್ ಮತ್ತಿತರರು ಪ್ರತಿರೋಧವೊಡ್ಡಿ ಚೇರ್‍ಅನ್ನು ದುಷ್ಕರ್ಮಿಗಳ ಮೇಲೆ ಎಸೆದು ಕೂಗಿಕೊಂಡರು.

ಮಾಲೀಕರ ದಿಢೀರ್ ಪ್ರತಿರೋಧದಿಂದ ಗಾಬರಿಗೊಂಡ ದರೋಡೆಕೋರರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೈಯಾಲಿಕಾವಲ್ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದು, ಸುತ್ತಮುತ್ತಲ ಪ್ರದೇಶಗಳ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ