ಕದ್ದಾಲಿಕೆಯಿಂದ ಬಹಿರಂಗಗೊಂಡ ಮಾಹಿತಿಯು ತನಿಖೆಯ ವ್ಯಾಪ್ತಿಗೆ ಒಳಪಡಬೇಕು-ಮಾಜಿ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಅ.21- ಟೆಲಿಪೋನ್ ಕದ್ದಾಲಿಕೆ ತನಿಖೆಯ ವೇಳೆ ಬಹಿರಂಗಗೊಳ್ಳುವ ಮಾಹಿತಿಗಳನ್ನು ಆಧರಿಸಿ ನೀತಿಗೆಟ್ಟ ಅಕ್ರಮಗಳು, ಲಂಚಕೊಡಕೊಳ್ಳುವ ವ್ಯವಹಾರಗಳು, ರಾಜ್ಯದ್ರೋಹದ ಕೆಲಸಗಳು ತನಿಖೆಗೆ ಒಳಪಡಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಟಿಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್‍ನ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರು, ಆಡಳಿತ ಮತ್ತು ಪ್ರತಿಪಕ್ಷದ ನಾಯಕರ, ಅವರ ಸಂಬಂಧಿಕರ, ಸ್ನೇಹಿತರ ದೂರವಾಣಿ ಕರೆಗಳ ಕದ್ದಾಲಿಕೆ ಮಾಡುವುದನ್ನು ಮಾತ್ರ ತನಿಖೆ ನಡೆಸಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಇದರಿಂದ ತನಿಖೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗಲಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ರಾಜ್ಯದಲ್ಲಿ ಕದ್ದಾಲಿಕೆ ನಡೆಯಿತೋ ಇಲ್ಲವೋ ಎಂಬುದನ್ನು ತಿಳಿಯಲು ಮಾತ್ರ ಆಸಕ್ತಿಯಲ್ಲ. ಕದ್ದಾಲಿಕೆ ಮಾಡಿದವರ ತಪ್ಪು ಎತ್ತಿ ತೋರಿಸುವುದು ಸರ್ಕಾರದ ಉದ್ದೇಶವಾಗಬಾರದು. ಕದ್ದಾಲಿಕೆಯಿಂದ ಬಹಿರಂಗಗೊಂಡ ಮಾಹಿತಿಯು ತನಿಖೆಯ ವ್ಯಾಪ್ತಿಗೆ ಒಳಪಡಬೇಕು ಎಂದಿದ್ದಾರೆ.

ದೂರವಾಣಿ ಕದ್ದಾಲಿಕೆಯಂತಹ ಆರೋಪಗಳು ಬಹು ಗಂಭೀರವಾದ ದೂರಗಾಮಿ ಪರಿಣಾಮಗಳನ್ನುಂಟು ಮಾಡುವುದರಿಂದ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಬೇಕು. ಎಲ್ಲಾ ಸತ್ಯಗಳು ಹೊರಬರಬೇಕು. ನೀತಿಗೆಟ್ಟ ಅಕ್ರಮಗಳು, ಲಂಚ ಕೊಡಕೊಳ್ಳುವ ವ್ಯವಹಾರಗಳು, ರಾಜ್ಯದ್ರೋಹದ ಕೆಲಸಗಳು, ಕಾನೂನು ಬಾಹಿರ ಕೆಲಸಗಳು ಈ ಕದ್ದಾಲಿಕೆಯಿಂದ ಲಭ್ಯವಾಗಿರುವ ಮಾಹಿತಿ ಆಧರಿಸಿ ಗಂಭೀರವಾದ ಕ್ರಿಮಿನಲ ಪ್ರಕರಣಗಳನ್ನು ದಾಖಲಿಸಿ, ಅದರಲ್ಲಿ ಭಾಗಿಯಾದವರ ಮತ್ತು ಅದಕ್ಕೆ ನೆರವು ನೀಡಿದ್ದರ ವಿರುದ್ದ ಕಾನೂನು ಪ್ರಕಾರ ಕ್ರಮಗಳಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರಕರ್ತರು, ಶ್ರೀಸಾಮಾನ್ಯರ ದೂರವಾಣಿಗಳು ಕದ್ದಾಲಿಕೆಯಾಗಿದ್ದರೆ ಅವರ ಖಾಸಗಿತನಕ್ಕೆ ಧಕ್ಕೆಯಾಗಿದ್ದರೆ ಅದಕ್ಕೆ ಗೌರವವಿಲ್ಲವೇ ಎಂದು ಪ್ರಶ್ನಿಸಿರುವ ಅವರು, ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಪತ್ರಕರ್ತರು ಮತ್ತು ಶ್ರೀಸಾಮಾನ್ಯರ ದೂರವಾಣಿಗಳು ಕದ್ದಾಲಿಕೆಯಾಗಿದ್ದರೆ ಅದನ್ನೂ ಸಹ ತನಿಖೆಯ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

ವ್ಯಕ್ತಿಯೊಬ್ಬರ ಖಾಸಗಿತನದಲ್ಲಿ ನೇರವಾದ ಮಧ್ಯಪ್ರವೇಶ ಶ್ರೀಸಾಮಾನ್ಯನ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಇದಾಗುತ್ತದೆ. ಕದ್ದಾಲಿಕೆ ನಡೆದಿದ್ದರೆ ಅಂಥ ಸಂದರ್ಭದಲ್ಲಿ ದೊರಕಿದ ಮಾಹಿತಿಯ ಹಿನ್ನೆಲೆಯಲ್ಲಿ ಸಂಭವಿಸಿರುವ ಅಪರಾಧ ಪ್ರಕರಣಗಳು ತನಿಖೆಗೆ ಒಳಪಡಬೇಕು. ಸತ್ಯ ಸಾರ್ವಜನಿಕರಿಗೆ ಲಭ್ಯವಾಗಬೇಕು. ತನ್ಮೂಲಕ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡುವ ಕ್ರಮಗಳಿಗೆ ಇಂಬು ಕೊಡಬೇಕು. ಇಂಥ ತನಿಖೆಗಳು ಕೇವಲ ಸಂಕುಚಿತ ಉದ್ದೇಶವನ್ನಿಟ್ಟುಕೊಂಡು ರಾಜಕೀಯ ಪ್ರತಿಕಾರದ ಕ್ರಮಗಳಾಗಿ ಬಳಕೆಯಾಗಬಾರದು. ಬದಲಿಗೆ ನಿಜವಾಗಿ ನಡೆದಿರುವ ಅಪರಾಧಗಳು, ನೀತಿಗೆಟ್ಟ ಕ್ರಮಗಳು ಮುಂತಾದವುಗಳು ತನಿಖೆಯಾಗಿ ತಪ್ಪು ಮಾಡಿದವರಿಗೆ, ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೇ ಹೊರಡಿಸಿರುವ ಆದೇಶವನ್ನು ಮಾರ್ಪಡಿಸಿ, ಪರಿಣಾಮಕಾರಿಯಾದ ತನಿಖೆಯಾಗುವಂತೆ ಎಲ್ಲ ಅಂಶಗಳನ್ನು ಒಳಗೊಂಡ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ