ನೆರವಿಗೆ ದಾವಿಸಿದ್ದ ದೋಣಿ ಮುಳುಗಿ 9 ಮಂದಿ ಜಲಸಮಾಧಿ

ಸಾಂಗ್ಲಿ, ಆ.8- ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಜಲಪ್ರಳಯದಿಂದ ಸಾವು-ನೋವು ಸಂಭವಿಸಿರುವಾಗಲೇ ಸಾಂಗ್ಲಿ ಜಿಲ್ಲೆಯ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರ ನೆರವಿಗೆ ದಾವಿಸಿದ್ದ ದೋಣಿಯೊಂದು ಮುಳುಗಿ 9 ಮಂದಿ ಜಲಸಮಾಧಿಯಾಗಿರುವ ದುರ್ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಈ ದುರಂತದಲ್ಲಿ ಇನ್ನೂ ನಾಲ್ವರು ನಾಪತ್ತೆಯಾಗಿದ್ದು, ಅವರೂ ಕೂಡ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಭಾರೀ ಮಳೆ ಮತ್ತು ಪ್ರವಾಹದಿಂದ ಜಲಾವೃತವಾಗಿರುವ ಸಾಂಗ್ಲಿ ಜಿಲ್ಲೆಯ ಪ್ರದೇಶವೊಂದರಲ್ಲಿ ಜನರ ಸಣ್ಣಗುಂಪೊಂದು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡು ಪ್ರಾಣ ರಕ್ಷಣೆಗಾಗಿ ಪರಿತಪಿಸುತ್ತಿದ್ದರು.

ಹದಿಮೂರು ಜನರಿದ್ದ ದೋಣಿಯೊಂದು ಅವರ ರಕ್ಷಣೆಗಾಗಿ ಉಕ್ಕಿ ಹರಿಯುತ್ತಿದ್ದ ನೀರಿನಲ್ಲಿ ದಾವಿಸುತ್ತಿದ್ದಾಗ ನೀರಿನ ಭೋರ್ಗರೆತದಿಂದ ದೋಣಿ ಮುಳುಗಿ 9 ಮಂದಿ ಮೃತಪಟ್ಟರು ಎಂದು ರಕ್ಷಣಾ ಕಾರ್ಯಾಚರಣೆ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಇನ್ನೂ ನಾಲ್ವರು ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಮುಂದುವರೆದಿದೆ.

ಪ್ರವಾಹದಲ್ಲಿ ಸಿಲುಕಿ ಅಪಾಯದಲ್ಲಿರುವ ಜನರ ರಕ್ಷಣೆಗಾಗಿ ಹೆಚ್ಚುವರಿ ದೋಣಿಗಳನ್ನು ರವಾನಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ