ಇಂದಿರಾ ಕ್ಯಾಂಟೀನ್ ಹೆಸರಿಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಮರುನಾಮಕರಣ

ಬೆಂಗಳೂರು,ಜು.29- ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ, ಇಂದಿರಾ ಕ್ಯಾಂಟೀನ್ ಹೆಸರಿಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.

ಯಡಿಯೂರಪ್ಪ ಸರ್ಕಾರ ತಾವು ಅಧಿಕಾರಕ್ಕೇರಿದ ಮೊದಲಿಗೆ ತೆಗೆದುಕೊಳ್ಳಲಾಗಿರುವ ಪ್ರಮುಖ ನಿರ್ಧಾರಗಳಲ್ಲಿ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡುವುದು ಸಹ ಸೇರಿದೆ.

ಹೆಸರು ಬದಲಾವಣೆಯ ಬಗ್ಗೆ ಬಿಜೆಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಸಾರ್ವಜನಿಕ ಆಡಳಿತ ಇಲಾಖೆಯೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರವು ಲಿಖಿತ ಆದೇಶಗಳನ್ನು ನೀಡಿದ ನಂತರ ಹೆಸರನ್ನು ಬದಲಾಯಿಸುವ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ಹೇಳಲಾಗಿದೆ.

ಯಾವುದೇ ರಾಜಕೀಯ ನಾಯಕ, ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರನ್ನು ಕ್ಯಾಂಟೀನ್‍ಗೆ ಇಡುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರೂ, ಅವರ ಹೆಸರನ್ನು ಬಳಸುವುದು ಕಾಂಗ್ರೆಸ್ ರಾಜಕೀಯ ಗಿಮಿಕ್. ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ ಅನೇಕ ಯೋಜನೆಗಳಿವೆ ಅವರು ಹೇಳಿದ್ದಾರೆ.

ಆಡಳಿತದ ಬದಲಾವಣೆಯೊಂದಿಗೆ ಹೆಸರು ಬದಲಾವಣೆಯನ್ನು ಸಂಪರ್ಕಿಸುವ ವಿಚಾರವಿಲ್ಲ. ಪಕ್ಷದ ಪ್ರಣಾಳಿಕೆಯಲ್ಲೂ ಈ ವಿಚಾರ ಘೋಷಣೆಯಾಗಿದ್ದರಿಂದಾಗಿ ಇಂದಿರಾ ಕ್ಯಾಂಟೀನ್‍ಗೆ ಮರುನಾಮಕರಣ ಮಾಡಲು ಹೊಸ ಸರ್ಕಾರ ಬಯಸಿದೆ.

ಹೈದರಾಬಾದ್‍ನಲ್ಲಿ ಸಹ ಅನ್ನಪೂರ್ಣ ಕ್ಯಾಂಟೀನ್ ಕಾರ್ಯಾರಂಭ ಮಾಡಿದೆ. ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಹೆಸರಿನಲ್ಲಿ ರಿಯಾಯಿತಿ ದರದ ಆಹಾರ ಪೂರೈಸುವ ಕ್ಯಾಂಟೀನ್‍ಗಳಿವೆ. ಅಮ್ಮ ಕ್ಯಾಂಟೀನ್‍ಗೆ ಸಮನಾಗಿರಲು, ಈ ಕ್ಯಾಂಟೀನ್‍ಗಳಲ್ಲಿ ನೀಡಲಾಗುವ ಆಹಾರದ ದರವನ್ನು ಕಡಿಮೆ ಮಾಡಲು ಮತ್ತು ಮೆನುವಿನಲ್ಲಿ ಹೆಚ್ಚಿನ ಆಯ್ಕೆಗಳನ್ನು ಸೇರಿಸಲು ಬಿಜೆಪಿ ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕಾಗಿ ಅಕ್ಷಯ ಪಾತ್ರೆ ಪ್ರತಿಷ್ಠಾನದೊಂದಿಗೆ ಕೈಜೋಡಿಸಲಿದೆ.

ಸಿದ್ದರಾಮಯ್ಯ ಸರ್ಕಾರ 2017ರ ಆಗಸ್ಟ್‍ನಲ್ಲಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‍ಗಳನ್ನು ಪ್ರಾರಂಭಿಸಿತ್ತು. ಇನ್ನು ಮುಂದೆ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಇರುವುದಿಲ್ಲ! ಆದರೆ ಗಾಬರಿಯಾಗಬೇಕಾಗಿಲ್ಲ. ಇರುವ ಇಂದಿರಾ ಕ್ಯಾಂಟೀನ್‍ಗಳಿಗೆ ಹೆಸರನ್ನಷ್ಟೇ ಬದಲಾಯಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ