ಅನರ್ಹತೆಗೆ ಹೆದರಲು ನಾವೇನೂ ಕಾಲೇಜು ಹುಡುಗರಲ್ಲ-ಶಾಸಕ ಎಚ್.ವಿಶ್ವನಾಥ್

ಮುಂಬೈ,ಜು.26- ಅನರ್ಹತೆಗೆ ಹೆದರಲು ನಾವೇನೂ ಕಾಲೇಜು ಹುಡುಗರಲ್ಲ. ನಾವೆಲ್ಲರೂ ಸಾಕಷ್ಟು ಅನುಭವಿಗಳಾಗಿದ್ದು, ಅನರ್ಹತೆ ವಿಚಾರವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನಾವೆಲ್ಲರೂ ಇಂತಹ ಸಾಕಷ್ಟು ಪ್ರಕರಣಗಳನ್ನು ಕಂಡಿದ್ದೇವೆ. ಇನ್ನೆರಡು-ಮೂರು ದಿನಗಳಲ್ಲಿ ಬೆಂಗಳೂರಿಗೆ ಬರುತ್ತೇವೆ ಎಂದರು.

ಸದ್ಯಕ್ಕೆ ನಾವೆಲ್ಲರೂ ಒಗ್ಗಟ್ಟಾಗಿದ್ದು, ಎಲ್ಲವನ್ನೂ ಎದುರಿಸಲು ಸಿದ್ದವಾಗಿದ್ದೇವೆ ಎಂದು ಅವರು ಹೇಳಿದರು.

ರಾಜಕೀಯ ಜೀವನದಲ್ಲಿ ನಾವೆಲ್ಲರೂ ಸಾಕಷ್ಟು ಏಳು-ಬೀಳುಗಳನ್ನು ಗಮನಿಸಿದ್ದೇವೆ. ಅನರ್ಹತೆಗೆ ಹೆದರಿ ಕೂರುವುದಿಲ್ಲ. ಸುಪ್ರೀಂಕೋರ್ಟ್‍ನಲ್ಲಿ ಅನರ್ಹತೆ ವಿಚಾರವನ್ನು ಪ್ರಸ್ನಿಸುವುದಾಗಿ ಅವರು ಪುನರುಚ್ಚರಿಸಿದರು.

ನಾವೆಲ್ಲ ಬಂಡೆಯಂತೆ ಗಟ್ಟಿಯಾಗಿದ್ದೇವೆ. ನಮ್ಮ ದಾರಿ ನಿಶ್ಚಳವಾಗಿದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ನಮಗೆ ಬೇಡವಾಗಿತ್ತು. ಅದು ಈಗ ಪತನವಾಗಿದೆ. ನಮ್ಮ ದಾರಿ ನಮಗೆ. ಯಾರಾದರೂ ಸಂಪರ್ಕದಲ್ಲಿರುವುದಾಗಿ ಹೇಳಿಕೊಳ್ಳುತ್ತಿದ್ದರೆ ಅದು ಭ್ರಮೆ. ನಮ್ಮೊಂದಿಗೆ ಮಾತನಾಡುವ ಮುಖ ಯಾವ ನಾಯಕರಿಗೂ ಇಲ್ಲ. ಮನವೊಲಿಸುವುದಂತೂ ಬೇರೆಯೇ ಮಾತು ಎಂದು ಅವರು ಸ್ಪಷ್ಟಪಡಿಸಿದರು.

ರಾಜಕೀಯ ನಿವೃತ್ತಿಯಾದರೂ ಹಿಂದೆ ಸರಿಯಲ್ಲ:
ರಾಜಕೀಯದಿಂದ ನಿವೃತ್ತರಾದರೂ ಸರಿಯೇ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಬಂಡಾಯ ಶಾಸಕ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಮೂವರು ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಅವರ ನಿರ್ಧಾರವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ. ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ. ಸದ್ಯಕ್ಕೆ ಬೆಂಗಳೂರಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ