ಹಿಂದೆ ವಿಶ್ವಾಸಮತಯಾಚನೆಗೆ ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ಆದೇಶ ಪ್ರಕಟಿಸಿ: ರೋಹಟಗಿ

ನವದೆಹಲಿ: ಈ ಹಿಂದೆ ವಿಶ್ವಾಸಮತಯಾಚನೆ ನಡೆಸಲು ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ಆದೇಶ ನೀಡಬೇಕೆಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಿದರು.

ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾ.ದೀಪಕ್ ಗುಪ್ತಾ, ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

ಮೊದಲ ವಾದ ಆರಂಭಿಸಿದ ಮುಕುಲ್ ರೋಹಟಗಿ ಶಾಸಕರು ತಮ್ಮ ಕೈ ಬರಹದಲ್ಲಿ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆ ಅಂಗೀಕಾರಕೊಂಡಿತ್ತು. ಆದರೆ ಈಗ ಸ್ಪೀಕರ್ ರಾಜೀನಾಮೆ ಅಂಗೀಕಾರಕ್ಕೆ ತಡ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

ರೋಹಟಗಿ ವಾದ ಹೀಗಿತ್ತು:
10 ಶಾಸಕರು ಜುಲೈ 10ರಂದೇ ರಾಜೀನಾಮೆ ನೀಡಿದ್ದಾರೆ. ಆರ್ಟಿಕಲ್ 190 ಮತ್ತು ಶೆಡ್ಯೂಲ್ 10ರ ನಡುವೆ ವ್ಯತ್ಯಾಸ ಇದ್ದು ಸ್ಪೀಕರ್ ನಿರ್ಧಾರವನ್ನು ಕೋರ್ಟ್ ಪ್ರಶ್ನಿಸಬಹುದು. ಅನರ್ಹತೆ ಬಾಕಿ ಇರೋದು ರಾಜೀನಾಮೆ ಸ್ವೀಕಾರಕ್ಕೆ ಅಡ್ಡಿಯಾಗಬಾರದು. ಉಮೇಶ್ ಜಾಧವ್ ಮೇಲೆ ಅನರ್ಹತೆ ದೂರು ಇದ್ದರೂ ರಾಜೀನಾಮೆ ಅಂಗೀಕರಿಸಲಾಗಿತ್ತು. ಅದೇ ರೀತಿ ಎಲ್ಲ ಶಾಸಕರು ರಾಜೀನಾಮೆಯನ್ನು ಅಂಗೀಕರಿಸಬೇಕು. ಈ ವಿಚಾರದಲ್ಲಿ ಸ್ಪೀಕರ್ ದ್ವಂದ್ವ ನೀತಿಯನ್ನು ಹೊಂದಿದ್ದಾರೆ. ಶಾಸಕರು ಅನರ್ಹ ಮಾಡುವಂತಹ ತಪ್ಪು ಏನು ಮಾಡಿದ್ದಾರೆ?

ನನ್ನ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ಭಾಗಿಯಾಗಿಲ್ಲ. ರಾಜೀನಾಮೆ ನೀಡಿದ ಬಳಿಕ ವಿಪ್ ಜಾರಿಯಾದ್ರೆ ಅನರ್ಹಗೊಳಿಸಲು ಹೇಗೆ ಸಾಧ್ಯ? ಪಕ್ಷಾಂತರ ನಮ್ಮ ಉದ್ದೇಶ ಅಲ್ಲ, ಸರ್ಕಾರದಿಂದ ಹೊರಬರುವುದು ನಮ್ಮ ಉದ್ದೇಶವಾಗಿದೆ. ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಡವಿಟ್ ಮೂಲಕವೇ ಹೇಳಿದ್ದಾರೆ. ಹೀಗಿರುವಾಗ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುವುದು ಸರಿಯೇ?

ನಾನು ಅನರ್ಹತೆ ಪ್ರಕರಣ ಕೈ ಬಿಡುವಂತೆ ಹೇಳಿಲ್ಲ. ಇಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಅನಹರ್ತತೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆರ್ಟಿಕಲ್ 191/2 ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಈ ಹಕ್ಕನ್ನು ತಡೆಯಲು ಸ್ಪೀಕರ್ ಅವರಿಗೆ ಸಾಧ್ಯವಿಲ್ಲ. ಶಾಸಕರು ಇಷ್ಟಪಟ್ಟಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರ್ವ ಸ್ವತಂತ್ರರು. ಎಲ್ಲ ಶಾಸಕರು ನಿಯಮಬದ್ಧವಾಗಿಯೇ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಈ ಕೂಡಲೇ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಬೇಕು.

ಅನರ್ಹತೆಗೊಳಿಸಲು ಯಾವುದೇ ಕಾರಣ ಇಲ್ಲ. ನಮ್ಮ ಕಕ್ಷಿದಾರರ ಮೇಲೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಸದನದ ಹೊರಗಿನ ಸಭೆಯಲ್ಲಿ ಭಾಗಿಯಾಗುತ್ತಿಲ್ಲ. ವಿಧಾನಸಭಾ ಕಲಾಪಕ್ಕೆ ಹಾಜರಾಗುವಂತೆ ಒತ್ತಡ ಹಾಕುವುದು ಸರಿಯೇ?

ಒಂದು ವೇಳೆ ವಿರೋಧ ಪಕ್ಷಗಳ ಜೊತೆ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಕಾಣಿಸಿಕೊಂಡರೆ ಅನರ್ಹತೆ ಪ್ರಶ್ನೆ ಬರುತ್ತದೆ. ಶಾಸಕಾಂಗ ಸಭೆಯಲ್ಲಿ ಭಾಗಿಯಾಗದ ಕಾರಣ ಅನರ್ಹತೆ ದೂರನ್ನು ನೀಡಲಾಗಿದೆ. ಅನರ್ಹತೆ ಮೂಲಕ ನಮ್ಮ ಶಾಸಕರನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಜೊತೆ ವಿಪ್ ಬಳಸಿಕೊಂಡು ನಮ್ಮ ಶಾಸಕರನ್ನು ಸದನಕ್ಕೆ ಬಲವಂತವಾಗಿ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಅನರ್ಹತೆಯ ಅಸ್ತ್ರದಿಂದ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ.

ಆರ್ಟಿಕಲ್ 90ರ ಪ್ರಕಾರ ಶಾಸಕರು ಕೈಬರಹದ ರಾಜೀನಾಮೆ ಪತ್ರ ನೀಡಿದಾಗ ಬೇರೆ ವಿಚಾರ ಪ್ರಸ್ತುತವಾಗುವುದಿಲ್ಲ. ಎಲ್ಲರೂ ನಿಯಮಬದ್ಧವಾಗಿಯೇ, ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಒಬ್ಬ ವ್ಯಕ್ತಿಗೆ ರಾಜೀನಾಮೆ ನೀಡಲು ಮಿಲಿಯನ್ ಕಾರಣಗಳಿರುತ್ತವೆ. ಕೆಲವರು ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬಹುದು. ಇನ್ನೂ ಕೆಲವರು ಬೇರೆ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮಧ್ಯಪ್ರದೇಶ, ಗೋವಾ ಸೇರಿ ಹಲವು ರಾಜ್ಯಗಳಲ್ಲಿ ರಾಜೀನಾಮೆ ಶೀಘ್ರ ಅಂಗೀಕಾರವಾಗಿದೆ. ಅನರ್ಹತೆ ಕಾರಣ ನೀಡಿ ಕೇರಳದ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಿರಲಿಲ್ಲ. ಕೇರಳ ಮತ್ತು ಕರ್ನಾಟಕ ಪ್ರಕರಣಕ್ಕೂ ಬಹಳಷ್ಟು ಸಾಮ್ಯತೆ ಇದೆ. ಸ್ವಇಚ್ಛೆಯಿಂದ ರಾಜೀನಾಮೆ ನೀಡಿಲ್ಲ ಎಂಬುದಕ್ಕೆ ಸ್ಪೀಕರ್ ಬಳಿ ಸಾಕ್ಷಿ ಏನಿದೆ? ಕೂಡಲೇ ರಾಜೀನಾಮೆ ಅಂಗೀಕಾರ ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಅನರ್ಹತೆಯ ಭೀತಿಯ ಕಾರಣದಿಂದ ರಾಜೀನಾಮೆಯನ್ನು ನೀಡಿಲ್ಲ. ನಾವು ನಿಗದಿತ ಸಮಯದಲ್ಲಿ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಮೈತ್ರಿ ಸರ್ಕಾರ ರಚನೆ ವೇಳೆ ರಾಜ್ಯಪಾಲರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಅದೇ ರೀತಿ ಸ್ಪೀಕರ್ ಅವರಿಗೂ ಆದೇಶದ ಮೂಲಕ ಸೂಚನೆಯನ್ನು ರವಾನಿಸಬೇಕು.

ರೋಹಟಗಿ ವಾದ ಮಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಾಮೂರ್ತಿಗಳು, ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ನಾವು ಹಸ್ತಕ್ಷೇಪ ಮಾಡಲು ಬರುವುದಿಲ್ಲ. ರಾಜೀನಾಮೆ ಅಥವಾ ಅನರ್ಹತೆ ಪ್ರಕರಣ ಇತ್ಯರ್ಥ ಮಾಡುವಂತೆ ಸೂಚಿಸಲು ಆಗುವುದಿಲ್ಲ. ಇಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿರಬಹುದು. ಸ್ಪೀಕರ್ ಅವರಿಗೆ ಹೀಗೆ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಲು ನಮಗೆ ಸಾಧ್ಯವಿಲ್ಲ. ಇದು ನನ್ನ ಅಭಿಪ್ರಾಯ ಎಂದು ಹೇಳಿ ವಾದಕ್ಕೆ ಅನುವು ಮಾಡಿಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ