ನಾಲ್ಕನೆ ಬಾರಿ ಭಗ್ನಗೊಂಡ ಫೈನಲ್ ತಲುಪುವ ಕನಸು

ಮ್ಯಾಂಚೆಸ್ಟರ್ ನಲ್ಲಿ ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಅಲ್ಪ ಮೊತ್ತದ ಹೊರತಾಗಿಯೂ ತನ್ನ ಅದ್ಭುತ ಸಾಂಘಿಕ ಹೋರಾಟದಿಂದ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ.
ಇಂದು ಸೆಮಿ ಫೈನಲ್ ಪಂದ್ಯ ನಡೆದ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನ ನ್ಯೂಜಿಲೆಂಡ್ ಪಾಲಿಗೆ ಮೊದಲಿನಿಂದಲೂ ದುರಾದೃಷ್ಟದ ಮೈದಾನವೆಂದೇ ಕುಖ್ಯಾತಿ ಪಡೆದಿದೆ. ಕಾರಣ ಈ ಮೈದಾನದಲ್ಲಿ ಈ ಹಿಂದೆ ನ್ಯೂಜಿಲೆಂಡ್ ತಂಡ ಆಡಿದ್ದ ಎರಡು ಸೆಮಿ ಫೈನಲ್ ಪಂದ್ಯಗಳಲ್ಲಿ ಕಿವೀಸ್ ಪಡೆ ಹೀನಾಯ ಸೋಲು ಕಂಡಿತ್ತು. 1979ರಲ್ಲಿ ಮೊದಲ ಬಾರಿಗೆ ಈ ಮೈದಾನದಲ್ಲಿ ನ್ಯೂಜಿಲೆಂಡ್ ತಂಡ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ 9 ರನ್ ಗಳ ರೋಚಕ ಜಯ ಸಾಧಿಸಿತ್ತು.
ಅಂದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ನಿಗದಿತ 60 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ತಂಡ 60 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಕೇವಲ 9 ರನ್ ಅಂತರದಲ್ಲಿ ಕಿವೀಸ್ ತಂಡ ಸೋಲು ಕಂಡಿತ್ತು.
ಇದಾದ ಬಳಿಕ 1999ರ ವಿಶ್ವಕಪ್ ಟೂರ್ನಿಯಲ್ಲೂ ನ್ಯೂಜಿಲೆಂಡ್ ತಂಡ ತಮ್ಮ ಸೆಮಿ ಫೈನಲ್ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿತ್ತು. ಅಂದು ಪಾಕಿಸ್ತಾನದ ವಿರುದ್ಧ 9 ವಿಕೆಟ್ ಹೀನಾಯ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ ಸೈಯ್ಯದ್ ಅನ್ವರ್ ಅವರ ಅಮೋಘ ಶತಕ (ಅಜೇಯ 113) ಮತ್ತು ವಜಾಹತುಲ್ಲಾ ವಾಸ್ತಿ (84 ರನ್) ಅವರ ಅದ್ಭುತ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಆ ಬಳಿಕ ಮತ್ತೆ ನಿನ್ನೆ ನ್ಯೂಜಿಲೆಂಡ್ ತಂಡ ತನ್ನ ಮೊದಲ ಬ್ಯಾಟಿಂಗ್ ವೇಳೆ ಭಾರತದ ಸಾಂಘಿಕ ಬೌಲಿಂಗ್ ಪ್ರದರ್ಶನದ ಪರಿಣಾಮ 239ರನ್ ಗಳ ಅಲ್ಪ ಮೊತ್ತಕ್ಕೆ ಕುಸಿಯಿತು. ಅದಾಗಲೇ ಕ್ರಿಕೆಟ್ ಪಂಡಿತರು ಈ ಮೈದಾನ ನ್ಯೂಜಿಲೆಂಡ್ ಪಾಲಿಗೆ ದುರಾದೃಷ್ಟದ ಮೈದಾನ ಎಂದು ವಿಶ್ಲೇಷಿಸಿದ್ದರು. ಆದರೆ ನ್ಯೂಜಿಲೆಂಡ್ ತಂಡ ಇಂದು ತನ್ನ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ತಬ್ಬಿಬ್ಬು ಮಾಡಿ 18 ರನ್ ಗಳ ಭರ್ಜರಿ ಜಯ ಸಾಧಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ