ದುಷ್ಕರ್ಮಿಗಳಿಂದ ನ್ಯೂಸ್ ರೀಡರ್ ಹತ್ಯೆ

ಕರಾಚಿ, ಜು.10– ವೈಯಕ್ತಿಕ ವೈಷಮ್ಯದಿಂದಾಗಿ ನ್ಯೂಸ್ ಆ್ಯಂಕರ್(ವಾರ್ತಾ ವಾಚಕ)ಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಕರಾಚಿಯ ಖಯಾಬನ್-ಎ-ಬುಖಾರಿ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಈ ಘಟನೆಯಲ್ಲಿ ಸುದ್ದಿ ಉದ್ಘೋಷಕನ ಸ್ನೇಹಿತನಿಗೂ ಗುಂಡೇಟು ತಗುಲಿದೆ.

ಬೋಲ್ ನ್ಯೂಸ್ ಚಾನೆಲ್‍ನಲ್ಲಿ ನ್ಯೂಸ್ ರೀಡರ್ ಆಗಿದ್ದ ಮುರೀದ್ ಅಬ್ಬಾಸ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಅಬ್ಬಾಸ್ ಅವರ ಗೆಳೆಯ ಖಿಝಾರ್ ಹಯಾತ್ ಎಂಬುವರೂ ಸಹ ಗುಂಡೇಟಿನಿಂದ ಹತರಾಗಿದ್ದಾರೆ.

ಹಣಕಾಸು ವಿವಾದ ಮತ್ತು ವೈಯಕ್ತಿಕ ದ್ವೇಷದಿಂದ ಅಬ್ಬಾಸ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮಹಾ ನಿರೀಕ್ಷಕ(ಡಿಐಜಿ) ಶರ್ಜಿಲ್ ಖರಾಲ್ ತಿಳಿಸಿದ್ದಾರೆ.

ದುಷ್ಕರ್ಮಿಗಳು ನಿನ್ನೆ ರಾತ್ರಿ ಅಬ್ಬಾಸ್ ಮತ್ತು ಹಯಾತ್ ಅವರ ಮೇಲೆ ಆಕ್ರಮಣ ಮಾಡಿ ಮನಬಂದಂತೆ ಗುಂಡು ಹಾರಿಸಿದರು. ಅನೇಕ ಬುಲೆಟ್‍ಗಳು ಅಬ್ಬಾಸ್ ಅವರ ದೇಹ ಒಕ್ಕಿದ್ದರಿಂದ ಅವರ ಸ್ಥಳದಲ್ಲೇ ಮೃತರಾದರು.

ಗುಂಡೇಟಿನಿಂದ ಗಾಯಗೊಂಡ ಹಯಾತ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಪೊಲೀಸರಿಗೆ ಹಂತಕರ ಬಗ್ಗೆ ಸುಳಿವು ದೊರೆತಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ