ಶಾಸಕರ ರಕ್ಷಣೆಗೆ ಎಚ್​ಡಿಕೆ ಮಾಸ್ಟರ್​ ಪ್ಲ್ಯಾನ್​; ಜೆಡಿಎಸ್​ನಿಂದ ರೆಸಾರ್ಟ್​​ ರಾಜಕಾರಣ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದಾಗ, ಆಪರೇಷನ್​ ಕಮಲದ ಭೀತಿ ಎದುರಾದಾಗ, ಶಾಸಕರು ರಾಜೀನಾಮೆ ನೀಡಲು ಮುಂದಾದಾಗ ಹಿರಿಯ ತಲೆಗಳಿಗೆ ನೆನಪಾಗುವುದು ರೆಸಾರ್ಟ್ ರಾಜಕಾರಣ​​. ಈಗ ಜೆಡಿಎಸ್​ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೊರಡಲು ಸಿದ್ಧತೆ ನಡೆಸಿದೆ. ಅರ್ಥಾತ್​, ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಿಂದಾಗಿ ಕಂಗಾಲಾಗಿರುವ ಜೆಡಿಎಸ್​ ಶಾಸಕರು ರೆಸಾರ್ಟ್​ ಸೇರುತ್ತಿದ್ದಾರೆ.

ಶಾಸಕರ ರಕ್ಷಣೆಗಾಗಿ ರೆಸಾರ್ಟ್ ಮೊರೆ ಹೋಗಲು ನಿನ್ನೆಯ ಸಭೆಯಲ್ಲಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹಾಗೂ ಹಿರಿಯ ನಾಯಕ ಎಚ್​ಡಿ ದೇವೇಗೌಡ ನಿರ್ಧರಿಸಿದ್ದಾರೆ. ಬೆಂಗಳೂರಿಗೆ ಸಮೀಪ ಇರುವ ರೆಸಾರ್ಟ್​ಗೆ ತೆರಳಲು ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.

ಇನ್ನೂ ಕೆಲ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇದು ಜೆಡಿಎಸ್​ ಹಿರಿಯ ನಾಯಕರಿಗೆ ತಲೆನೋವಾಗಿ ಕಾಡಿದೆ. ಹಾಗಾಗಿ, ಯಾವ ಶಾಸಕರೂ ಬಿಜೆಪಿ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಲು ರೆಸಾರ್ಟ್​​ ರಾಜಕಾರಣ ಆರಂಭಿಸಲು ಎಚ್​ಡಿಕೆ ನಿರ್ಧರಿಸಿದ್ದಾರೆ.

ಅತೃಪ್ತರಿಗೆ, ಹೊಸಬರಿಗೆ ಅವಕಾಶ ನೀಡಲು ಸಚಿವರಿಂದ ಸಾಮೂಹಿಕವಾಗಿ ರಾಜೀನಾಮೆ ಪಡೆಯಲಾಗುತ್ತಿದೆ. ಇದಾದ ನಂತರದಲ್ಲಿ ರೆಸಾರ್ಟ್​​ಗೆ ತೆರಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.  ಈ ಮೊದಲು ಆಪರೇಷನ್​ ಕಮಲ ವಿಚಾರ ಬಂದಾಗ ಜನವರಿ ತಿಂಗಳಲ್ಲಿ ಈಗಲ್ ಟನ್‌ ರೆಸಾರ್ಟ್​​ನಲ್ಲಿ ರಾಜ್ಯ ಕಾಂಗ್ರೆಸ್​​ ಶಾಸಕರು ವಾಸ್ತವ್ಯ ಹೂಡಿದ್ದರು.

ರೆಸಾರ್ಟ್ ಬಿಟ್ಟು ಶಾಸಕರು ಬೇರೆ ಎಲ್ಲೂ ಹೋಗಬಾರದು ಎಂದು ಸೂಚಿಸಲಾಗಿತ್ತು. ಜೊತೆಗೆ, ಅವರಿಗೆ ಬಂದ ದೂರವಾಣಿ ಕರೆಯನ್ನು ಅಲ್ಲಿರುವ ನಾಯಕರು ಪರಿಶೀಲನೆ ಮಾಡಬೇಕಿತ್ತು. ಒಂದು ವೇಳೆ ತುರ್ತು ಕೆಲಸ ಇದ್ದರೆ ಮಾತ್ರ ರೆಸಾರ್ಟ್​​ ಬಿಟ್ಟು ತೆರಳಬಹುದಿತ್ತು. ಇದೇ ರೀತಿಯ ಷರತ್ತುಗಳನ್ನು ಜೆಡಿಎಸ್​​ ಶಾಸಕರಿಗೂ ವಿಧಿಸುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ