ರಾಯಚೂರಿಗೆ 3 ಸಾವಿರ ಕೋಟಿ ರೂ. ಅನುದಾನ; ಗ್ರಾಮವಾಸ್ತವ್ಯಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಭರವಸೆ

ರಾಯಚೂರು: ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ನಡೆಸಿರುವ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ರಾಯಚೂರಿನ ವಿವಿಧ ಯೋಜನೆಗಳಿಗೆ 3 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.

ರಾಯಚೂರು ವಿಶ್ವವಿದ್ಯಾಲಯದ ಬಗ್ಗೆಯೂ ಕ್ಯಾಬಿನೆಟ್​ನಲ್ಲಿ ಚರ್ಚೆ ನಡೆಸಲಾಗುವುದು. ನಾನಿಲ್ಲಿ ಕೇವಲ ಗ್ರಾಮವಾಸ್ತವ್ಯಕ್ಕಾಗಿ ಬಂದಿಲ್ಲ. ಯಾವುದೇ ಯೋಜನೆಗೆ ಹಣದ ಕೊರತೆ ಇಲ್ಲ. ಸಾಲಮನ್ನಾದಿಂದಾಗಿ ಹಣದ ಕೊರತೆಯಾಗಿಲ್ಲ. ಯಾವ ಇಲಾಖೆಯ ಹಣವನ್ನೂ ಕಡಿತ ಮಾಡಿಲ್ಲ. ನನ್ನ ವೇಗಕ್ಕೆ ಅಧಿಕಾರಿಗಳು ಬರಬೇಕು. ನೀರಾವರಿ ಇಲಾಖೆಗೆ 19 ಸಾವಿರ ಕೋಟಿ ರೂ. ನೀಡಿದ್ದೇನೆ. ರಾಜ್ಯದ ಆರೂವರೆ ಕೋಟಿ ಜನ ನನಗೆ ಅಣ್ಣತಮ್ಮಂದಿರು ಎಂದು ಹೇಳಿದ್ದಾರೆ.

ಇಂದು 200 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. 227 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾಗೆ ಬಿಡುಗಡೆ ಮಾಡಲಾಗುವುದು. ಗ್ರಾಮವಾಸ್ತವ್ಯಕ್ಕೆ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿರುವುದು ನಿಜ. ಈ ಶೌಚಾಲಯದಿಂದ ಮುಂದೆ ಮಕ್ಕಳಿಗೆ ಅನುಕೂಲ ಆಗುತ್ತದೆ. ನನಗಾಗಿ ಮಲಗಲು ಮಂಚವೂ ಬೇಡ ಎಂದಿದ್ದೇನೆ. ವಾಸ್ತವ್ಯಕ್ಕೆ ಒಂದು ಹಾಸಿಗೆ ಸಾಕು ಎಂದಿದ್ದೇನೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಇಂದೋ ನಾಳೆಯೋ ಬಿದ್ದು ಹೋಗುವುದಿಲ್ಲ. ಸರ್ಕಾರದಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುತ್ತದೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ. ಕೇವಲ ಬೆಂಗಳೂರು ಮಾತ್ರವಲ್ಲ, ಎಲ್ಲ ಜಿಲ್ಲೆಗಳಲ್ಲೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ. ನೀರಿನ ಲಭ್ಯತೆ ಮೇಲೆ ಕೆಲಸ ಆಗುತ್ತದೆ. ಮೈತ್ರಿ ಸರ್ಕಾರ ತೆಗೆದುಕೊಂಡ ನಿರ್ಣಯ, ಯೋಜನೆಗಳು ಜನರಿಗೆ ಗೊತ್ತಾಗಲು ಐದಾರು ತಿಂಗಳು ಬೇಕಾಗಿದೆ. ಶಿಕಾರಿಪುರಕ್ಕೆ ನೀರಾವರಿಗೆ 500 ಕೋಟಿ ರೂ. ಕೊಟ್ಟಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ