ಎಂಎಸ್‍ಐಎಲ್‍ನಿಂದ ದಾಖಲೆ ವಹಿವಾಟು

ಬೆಂಗಳೂರು, ಜೂ. 18- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್(ಎಂಎಸ್‍ಐಎಲ್) ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಜನಸಾಮಾನ್ಯರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ 2000ಕೋಟಿ ರೂ.ಗಳಿಗೂ ಹೆಚ್ಚು ದಾಖಲೆ ವಹಿವಾಟು ಮಾಡಿದೆ ಎಂದು ಅಧ್ಯಕ್ಷ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.

2018-19ನೇ ಸಾಲಿನಲ್ಲಿ ದಾಖಲೆ ವಹಿವಾಟು ನಡೆಸಿರುವ ನಮ್ಮ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ 2200ಕೋಟಿ ರೂ. ವಹಿವಾಟು ಸಾಧಿಸುವ ಗುರಿ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಸುಮಾರು 2500 ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದು ಪುನರ್ ಪರಿಶೀಲನಾ ಸಭೆಯಲ್ಲಿ ಅವರು ತಿಳಿಸಿದರು.

ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿದೇಶಿ ನದಿ ಮರಳು ಮಾರಾಟವನ್ನು ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಲಾರಿಗಳ ಮುಖಾಂತರವೇ ಗ್ರಾಹಕರ ಸ್ಥಳಕ್ಕೆ ಸೇವೆಯನ್ನು ಒದಗಿಸಲಾಗುವುದು ಎಂದು ಹೇಳಿದರು.

ಎಂಎಸ್‍ಐಎಲ್ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ವಿವಿಧ ಉತ್ಪನ್ನಗಳ ಮಾರಾಟ ಮತ್ತು ಸೇವೆಗಳಲ್ಲಿ ತೊಡಗಿಸಿಕೊಂಡ ಉತ್ಕøಷ್ಟ ಸಂಸ್ಥೆಯಾಗಿದೆ. ರಾಜ್ಯಾದ್ಯಂತ ಹೆಚ್ಚು ಚಿಟ್ ಫಂಡ್‍ಗಳನ್ನು ಪ್ರಾರಂಭಿಸಲಾಗಿದೆ. ಜನರು ಇಲ್ಲಿ ಹಣ ತೊಡಗಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಿದೆ. ಈ ವಿಭಾಗದಿಂದ 235ಕೋಟಿ ರೂ.ವಹಿವಾಟು ಮಾಡಲಾಗಿದೆ.ಸುಮಾರ 3ಲಕ್ಷ ಚಂದಾದಾರರು ಚಿಟ್ ಫಂಡ್ ಯೋಜನೆಯ ಸೇವೆಯನ್ನು ಪಡೆದುಕೊಂಡಿದ್ದಾರೆ.

ಎಂಎಸ್‍ಐಎಲ್ ಸಂಸ್ಥೆಯು ಪ್ರಧಾನ ಮಂತ್ರಿ ಜನೌಷಧಿ ಯೋಜನೆಯಡಿ ಸುಮಾರು 74 ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಿರುವ ದೇಶದ ಏಕೈಕ ಸಂಸ್ಥೆಯಾಗಿರುವುದು ಹೆಮ್ಮೆಯ ವಿಷಯ. ಇದಲ್ಲದೆ ಲೇಖಕ ಮತ್ತು ವಿದ್ಯಾ ನೋಟ್ ಪುಸ್ತಕಗಳ ಮಾರಾಟ ಹಾಗೂ ಇತರೆ ಲೇಖನಿ ಸಾಮಗ್ರಿಗಳನ್ನು, ಸಾರ್ವಜನಿಕ ಮತ್ತು ಸರ್ಕಾರಿ ಇಲಾಖೆಗಳಿಗೆ ಸರಬರಾಜು ಮಾಡಿ ಸುಮಾರು 83.81ಕೋಟಿ ರೂ.ವಹಿವಾಟು ಮಾಡಿದೆ ಎಂದು ಡಿ.ಸಿ.ಗೌರಿಶಂಕರ್ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ 800ಸಿಎಲ್-11ಸಿ ಮದ್ಯ ಮಳಿಗೆಗಳನ್ನು ಹೊಂದಲಾಗಿದೆ. ಇನ್ನು ಹಲವು ಕಡೆ 554 ಸಿಲ್-11ಸಿ ಸನ್ನದುಗಳನ್ನು ಪ್ರಾರಂಭಿಸುವ ಗುರಿ ಹೊಂದಿದ್ದೇವೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮದ್ಯ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಎಂಎಸ್‍ಐಎಲ್ ಮುಖ್ಯಪ್ರಧಾನ ವ್ಯವಸ್ಥಾಪಕ ಎ.ಎಂ.ಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಸಿ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ