ಕೆಎಂಎಫ್​ ಅಧ್ಯಕ್ಷ ಪಟ್ಟಕ್ಕಾಗಿ ದೋಸ್ತಿಗಳ ನಡುವೆ ಜಟಾಪಟಿ; ಸಚಿವರಾದ ನಿಮಗೆ ಏಕೆ ಆ ಸ್ಥಾನ ಎಂದು ರೇವಣ್ಣಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರುಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್​) ಅಧ್ಯಕ್ಷ ಗಾದಿಗಾಗಿ ಇದೀಗ ಮತ್ತೆ  ದೋಸ್ತಿಗಳ ಕಾಳಗ ಶುರುವಾಗಿದೆ. ಅಧ್ಯಕ್ಷ ಪಟ್ಟ ತನಗೆ ಬೇಕು ಎಂದು ಸಚಿವ ರೇವಣ್ಣ ಪಟ್ಟು ಹಿಡಿದಿದ್ದರೆ, ತಮಗಾಗಲೇ ಸಚಿವ ಸ್ಥಾನವಿದೆ. ಹೀಗಾಗಿ ಈ ಸ್ಥಾನ ತಮಗೆ ಇರಲಿ ಎಂದು ರೇವಣ್ಣ ಆಪ್ತ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕೈ ನಾಯಕರು ಜಿದ್ದಿಗೆ ಬಿದ್ದಿದ್ದಾರೆ.

ಈ ಮೊದಲಿನಿಂದಲೂ ಸ್ನೇಹಿತರಾಗಿರುವ ರೇವಣ್ಣ ಮತ್ತು ಸಿದ್ದರಾಮಯ್ಯ ನಡುವೆ ಈ ವಿಚಾರವಾಗಿ ಭಿನ್ನಮತ ಆರಂಭವಾಗಿದೆ. ಆಪರೇಷನ್ ಕಮಲ ತಪ್ಪಿಸಲು  ಹಗರಿಬೊಮ್ಮನಹಳ್ಳಿ ಕಾಂಗ್ರೆಸ್​ ಶಾಸಕ ಭೀಮಾನಾಯ್ಕ್​ಅವರಿಗೆ ಕೆಎಂಎಫ್​ ಅಧ್ಯಕ್ಷ ಸ್ಥಾನ ಕೊಡಬೇಕು. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಶಾಸಕ ಭೀಮಾನಾಯ್ಕ್​ಗೆ ಬಿಜೆಪಿ ಸೇರುವ ಸನಿಹದಲ್ಲಿದ್ದಾರೆ. ಅವರು ಪಕ್ಷ ಬಿಡದಂತೆ ಮನವೊಲಿಸಿದ್ದೇವೆ. ಇದೀಗ ಅವರಿಗೆ ಸರಿಯಾದ ಸ್ಥಾನಮಾನ ನೀಡದಿದ್ದರೆ ಮತ್ತೆ ಬಿಜೆಪಿ ಸೇರಲು ಮುಂದಾಗಬಹುದು. ಹೀಗಾಗಿ ಅವರಿಗೆ ಕೆಎಂಎಫ್​ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟುಹಿಡಿದಿದ್ದಾರೆ.

ಎಚ್​.ಡಿ.ರೇವಣ್ಣ ಈಗ ಲೋಕೋಪಯೋಗಿ ಸಚಿವರಾಗಿಲ್ಲವೇ? ಅವರಿಗೆ ಕೆಎಂಎಫ್  ಅಧ್ಯಕ್ಷ ಹುದ್ದೆಯೂ ಬೇಕು ಅಂದ್ರೆ ಹೇಗೆ? ಅಧ್ಯಕ್ಷ ಸ್ಥಾನ ನಮಗೆ ಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.

ಪ್ರಸ್ತುತ ಬಳ್ಳಾರಿ ಹಾಲು ಒಕ್ಕೂಟ ನಿರ್ದೇಶಕರಾದ ಭೀಮಾನಾಯ್ಕ್ ಅವರಿಗೆ ಕೆಎಂಎಫ್​ ಪಟ್ಟ ಕಟ್ಟಲು ಕಾಂಗ್ರೆಸ್​ ನಾಯಕರು ನಿರ್ಧರಿಸಿದ್ದಾರೆ. ಆದರೆ, ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದು ಕರೆಸಿಕೊಳ್ಳುವ ರೇವಣ್ಣ ಅವರು ಈ ಸ್ಥಾನವನ್ನು ಬಿಟ್ಟುಕೊಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ