ಐಎಂಎ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ವಹಿಸಿದ ಸರ್ಕಾರ

ಬೆಂಗಳೂರು, ಜೂ.11- ಸಾರ್ವಜನಿಕರ ಹೂಡಿಕೆಯನ್ನು ವಂಚಿಸಿರುವ ಐಎಂಎ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ದಳಕ್ಕೆ ಒಪ್ಪಿಸಿದೆ.

ಸುಮಾರು 50 ಸಾವಿರ ಮಂದಿ ಹೂಡಿಕೆದಾರರು, 10 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿನ ಹಣಕಾಸು ವಹಿವಾಟು ಇರುವ ಐಎಂಎ ಜ್ಯೂಲರ್ಸ್ ಹಗರಣವನ್ನು ಮೊದಲು ಸಿಸಿಬಿ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದರು. ಆದರೆ ಕಾಂಗ್ರೆಸ್‍ನ ಜನಪ್ರತಿನಿಧಿಗಳ ನಿಯೋಗ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಂತರಾಜ್ಯ ಮಟ್ಟದಲ್ಲಿ ಹಗರಣ ನಡೆದಿದೆ. ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಗೂ ಈ ಹಗರಣದ ಬಾಹುಗಳು ಚಾಜಿವೆ. ಹಾಗಾಗಿ ಸಿಸಿಬಿಯಿಂದ ಸಮಗ್ರ ತನಿಖೆ ಸಾಧ್ಯವಿಲ್ಲ.

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಹಣಕಾಸು ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸುವಂತೆ ಒತ್ತಡ ಹೇರಿದ್ದರು.

ಮೊದಲು ಸಿಸಿಬಿಗೆ ಒಪ್ಪಿಸಿರುವುದಾಗಿ ಟ್ವಿಟ್ ಮಾಡಿದ ಮುಖ್ಯಮಂತ್ರಿ ಅವರು, ತದನಂತರ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದಾರೆ.

ಪ್ರಕರಣವನ್ನು ಅತ್ಯಂ ಗಂಭೀರವಾಗಿ ಪರಿಗಣಿಸಲಾಗಿದ್ದು, ಹೂಡಿಕೆದಾರರ ಆತಂಕವನ್ನು ಸರ್ಕಾರ ಅರ್ಥ ಮಾಡಿಕೊಂಡಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ವಂಚನೆಗೆ ಒಳಗಾದವರಿಗೆ ನ್ಯಾಯಕೊಡಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ಗೃಹ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೂ ಮಾತನಾಡಿದ್ದು, ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸೂಚಿಸಿದ್ದೇನೆ. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

ಹಣ ಹೂಡಿಕೆ ಮಾಡಿರುವವರು ಈಗ ಆತಂಕ್ಕೆ ಒಳಗಾಗಿದ್ದು, ಅನೇಕರ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಕೂಡಲೇ ವಿಶೇಷ ತನಿಖಾದಳ (ಎಸ್‍ಐಟಿ) ತನಿಖೆಗೆ ಒಪ್ಪಿಸಿ ಒಂದು ವೇಳೆ ಎಸ್‍ಐಟಿಯಿಂದ ಸೂಕ್ತ ತನಿಖೆ ಸಾಧ್ಯವಾಗದಿದ್ದರೆ ಸಿಬಿಐಗೆ ವಹಿಸುವಂತೆ ಅಲ್ಪಸಂಖ್ಯಾತ ಸಮುದಾಯz ಜನ ಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ