ಬೆಂಗಳೂರು, ಜೂ.6-ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ಅವರೇ ಮುಂದುವರೆಯುತ್ತಾರೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯ ಓಡಾಡಿ ಪಕ್ಷ ಸಂಘಟನೆ ಮಾಡಬೇಕಿದೆ. ಹೀಗಾಗಿ ವಿಶ್ವನಾಥ್ ಅವರು ಈಗಾಗಲೇ ನೀಡಿರುವ ರಾಜೀನಾಮೆಯನ್ನು ಹಿಂಪಡೆದು ಅಧ್ಯಕ್ಷರಾಗಿ ಮುಂದುವರೆಯಬೇಕು. ನಮ್ಮಂತಹ ನೂರಾರು ಕಾರ್ಯಕರ್ತರಿಗೆ ವಿಶ್ವನಾಥ್ ಮಾರ್ಗದರ್ಶನ ಮಾಡಬೇಕು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಶ್ವನಾಥ್ ಅವರ ಮನವೊಲಿಸುತ್ತಾರೆ.ಪಕ್ಷದ ಅಧ್ಯಕ್ಷರಾಗಿ ಅವರೇ ಮುಂದುವರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ನಾನು ಜೆಡಿಎಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ವಿಶ್ವನಾಥ್ ಅವರೇ ಮುಂದುವರೆಯುವ ಸಾಧ್ಯತೆ ಇರುವುದರಿಂದ ಮತ್ತೊಬ್ಬರ ನೇಮಕದ ಬಗ್ಗೆ ಚರ್ಚೆ ಅನಗತ್ಯ ಎಂದರು.