ಶಾಲೆ, ಆಸ್ಪತ್ರೆ ಸುತ್ತಮುತ್ತ ಮೊಬೈಲ್​ ಟವರ್​ ನಿರ್ಮಿಸುವಂತಿಲ್ಲ; ರಾಜ್ಯ ಸರ್ಕಾರದಿಂದ ಹೊಸ ಕಾನೂನು

ಬೆಂಗಳೂರು ಡಿಜಿಟಲ್​ ಯುಗದಲ್ಲಿ ಮೊಬೈಲ್​ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ, ರಸ್ತೆಗೆ ಮೂರರಂತೆ ಮೊಬೈಲ್​ ಟವರ್​ಗಳು ತಲೆ ಎತ್ತುತ್ತಿವೆ.

ಸಂಪರ್ಕ ಸಾಧಿಸಲು ನೆರವಾಗುವ ಈ ಮೊಬೈಲ್​ ಟವರ್​ಗಳು ಜೀವಕ್ಕೆ ಹಾನಿಕಾರಕವೂ ಹೌದು. ಇದೇ ಉದ್ದೇಶದಿಂದ ಮೊಬೈಲ್​ ಟವರ್​ ಕಡಿವಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಟವರ್​ ನಿಂದ ಆಗುತ್ತಿರುವ ದುಷ್ಪರಿಣಾಮ ಅರಿತ ಸರ್ಕಾರ ಆಸ್ಪತ್ರೆ, ಶಾಲೆ ಹಾಗೂ ಕೆಲವು ನಿಗದಿಪಡಿಸಿದ ಸ್ಥಳಗಳ 50 ಮೀಟರ್ ಪರಿಧಿಯೊಳಗೆ ಇನ್ನು ಮುಂದೆ ಯಾವುದೇ ಟವರ್​ ನಿರ್ಮಾಣ ಮಾಡದಂತೆ ಆದೇಶ ನೀಡಿದೆ. ಅಲ್ಲದೇ ಇದು ಅಕ್ರಮವಾಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಆಸ್ಪತ್ರೆ, ಶಾಲೆಯ 50 ಮೀ. ಒಳಗೆ ಹೊಸ ಟವರ್​ ನಿರ್ಮಾಣ ಮಾಡದಂತೆ ಆದೇಶ ಹೊರಡಿಸಿದೆ.

ಟೆಲಿಕಮ್ಯೂನಿಕೆಷನ್​ ಇನ್ಫ್ರಾಸ್ಟ್ರಕ್ಚರ್​ ಟವರ್​ ರೆಗ್ಯೂಲೇಷನ್​ 2019 ಪ್ರಕಾರ ರಾಜ್ಯ ಸರ್ಕಾರ ಮಕ್ಕಳ ಹಾಗೂ ರೋಗಿಗಳ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಈ ಆದೇಶದಂತೆ ಮೇ 29ರಿಂದ ಯಾವುದೇ ಹೊಸ ಟವರ್​ ನಿರ್ಮಾಣ ಮಾಡಬೇಕಾದರೆ ಈ ಕ್ರಮ ಅನುಸರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮ ಮೀರಿ ಟವರ್​​ಗಳ ನಿರ್ಮಾಣಕ್ಕೆ ಮುಂದಾದರೆ, ಇವುಗಳನ್ನು ಮುಲಾಜಿಲ್ಲದೇ ಸ್ಥಳಾಂತರ ಮಾಡಲಾಗುವುದು ಎಂದು ಕೂಡ ತಿಳಿಸಲಾಗಿದೆ. ಈ ಸ್ಥಳಾಂತರಕ್ಕೆ ಎರಡು ಮೂರು ತಿಂಗಳು ಕಾಲಾವಕಾಶ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯುಟಿ ಖಾದರ್​ ತಿಳಿಸಿದ್ದಾರೆ.

ನದಿ ದಡದ ಆಸುಪಾಸಿನಲ್ಲಿ ಟವರ್​ ಇದ್ದರೆ ಅದನ್ನು 6 ಮೀಟರ್​ ದೂರದಲ್ಲಿ ಸ್ಥಳಾಂತರಿಸುವಂತೆ ಕೂಡ ಸೂಚಿಸಲಾಗಿದೆ. ಅದರಂತೆ ಕೆರೆ ಪ್ರದೇಶದಿಂದ 5 ಮೀ, ವಾಟರ್​ಟ್ಯಾಂಕ್​ಗಳಿಂದ 10 ಹೆಕ್ಟೇರ್​ ದೂರದಲ್ಲಿ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.

ಬಡಾವಣೆಗಳಲ್ಲಿ ಖಾಲಿಜಾಗದ ಸ್ಥಳದಲ್ಲಿ ನಿರ್ಮಾಣವಾಗಬೇಕು ಅದು ಬಫರ್​ ಜೋನ್​ ನಿಂದ ಮೂರು ಮೀ ಅಂತರದಲ್ಲಿ ಎಂದು ತಿಳಿಸಲಾಗಿದೆ. ಒಂದು ವೇಳೆ ನಿರ್ಜನ ಪ್ರದೇಶ ಸಿಗದಿದ್ದರೆ, ಮನೆಯ ಅಂತಸ್ತಿನ ಮೇಲೆ ಕಟ್ಟಡದಿಂದ ಮೂರು ಮೀಟರ್​ ಅಂತರದಲ್ಲಿ ನಿರ್ಮಿಸಬೇಕು.

ಇನ್ನು ಬೆಂಗಳೂರಿನಲ್ಲಿ ಟೆಲಿಕಾಮ್​ ಕಂಪನಿಗಳು ಟವರ್​ ನಿರ್ಮಾಣ ಮಾಡುವ ಮುನ್ನ ಬಿಬಿಎಂಪಿಗೆ 1 ಲಕ್ಷ ಹಣ ನೀಡಬೇಕು, ಇನ್ನುಳಿದ ಜಿಲ್ಲೆಗಳಲ್ಲಿ ನಗರಸಭೆ ಹಾಗೂ ಪಟ್ಟಣ ಪಂಚಾಯತ್​, ಗ್ರಾಮ ಪಂಚಾಯತ್​ಗಳಿಗೂ ನಿಗದಿಪಡಿಸಿದ ಶುಲ್ಕ ಸಂದಾಯ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ