ವಿವಾಹದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಎಸ್.ಎ.ಚಿನ್ನೇಗೌಡರು

ಬೆಂಗಳೂರು, ಜೂ.3- ಎಪ್ಪತ್ತೈದು ಸಂವತ್ಸರಗಳನ್ನು ಪೂರೈಸಿ ವಿವಾಹದ ಸುವರ್ಣ ಮಹೋತ್ಸವವನ್ನು ನಿರ್ಮಾಪಕ ಹಾಗೂ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡರು ಸಂಭ್ರಮದಿಂದ ಆಚರಿಸಿಕೊಂಡರು.

ಚಿನ್ನೇಗೌಡ ಅವರ ಪುತ್ರರಾದ ನಟ ವಿಜಯ್ ರಾಘವೇಂದ್ರ ಹಾಗೂ ಶ್ರೀ ಮುರಳಿ ಮತ್ತು ಪುತ್ರಿ ವೀಣಾ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಈ ಸುಸಂದರ್ಭಕ್ಕಾಗಿ ಗಣಪತಿ ಹೋಮ, ಆಯುಷ್ಯ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಸಮಾರಂಭ ಆಯೋಜಿಸಿದ್ದರು.

ಪತ್ನಿ ಜಯಮ್ಮರೊಡಗೂಡಿ ದೇವಾಲಯದಲ್ಲಿ ನಡೆದ ಪೂಜೆ-ಪುನಸ್ಕಾರದಲ್ಲಿ ಚಿನ್ನೇಗೌಡರು ಭಾಗಿಯಾಗಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎ.ಚಿನ್ನೇಗೌಡರು ತಮ್ಮ ಭಾವ ಡಾ.ರಾಜ್‍ಕುಮಾರ್ ಹಾಗೂ ಅಕ್ಕ ಪಾರ್ವತಮ್ಮ ರಾಜ್‍ಕುಮಾರ್ ಅವರನ್ನು ಸ್ಮರಿಸಿದರು.ಬದುಕಿನಲ್ಲಿ ಯಶಸ್ಸಿಗೆ ಒಗ್ಗಟ್ಟೇ ಕಾರಣ ಎಂದರು.

ನಮ್ಮ ಅವಿಭಕ್ತ ಕುಟುಂಬದಿಂದ ಒಗ್ಗಟ್ಟು ಏನೆಂಬುದು ಅರಿವಾಗಿದೆ.ಒಗ್ಗಟ್ಟಿನಿಂದ ಇದ್ದರೆ ಏನಾದರೂ ಸಾಧಿಸಬಹುದು.ಇದಕ್ಕೆ ನನ್ನ ಪತ್ನಿಯೂ ಸಹಕಾರ ನೀಡಿದ್ದಾರೆ.ಈಗ ನನ್ನ ಮಕ್ಕಳಿಗೂ ಅದನ್ನೇ ತಿಳಿಸಿದ್ದೇವೆ ಎಂದು ನುಡಿದರು.

ಕರ್ನಾಟಕದ ಜನ ನಮ್ಮನ್ನು ಗುರುತಿಸುತ್ತಾರೆ ಎಂದರೆ ಅದಕ್ಕೆ ನಮ್ಮ ಭಾವ ಡಾ.ರಾಜ್‍ಕುಮಾರ್ ಕಾರಣ.ನಮ್ಮದು ಶಿಕ್ಷಕರ ಕುಟುಂಬ.ನಮ್ಮ ತಂದೆ ಸಹ ಶಿಕ್ಷಕರಾಗಿದ್ದರು.ನಾನು ಶಿಕ್ಷಕ ವೃತ್ತಿಯಲ್ಲಿದ್ದೆ.ನನಗೆ ಆಸ್ತಮಾ ಇದ್ದಿದ್ದರಿಂದ ಗುಣಪಡಿಸಿಕೊಳ್ಳಲು ಪಾರ್ವತಮ್ಮ ಅವರ ಸಲಹೆಯಂತೆ ಬೆಂಗಳೂರಿಗೆ ಬಂದೆ.

ಇಲ್ಲಿ ಯೋಗಗುರು ಎಚ್.ಎಂ.ನಾಯಕ್ ಅವರಲ್ಲಿ ಯೋಗಾಭ್ಯಾಸ ಮಾಡುತ್ತ ಔಷಧಿ ಪಡೆದು ಗುಣಮುಖನಾದೆ.

ನಂತರದ ದಿನಗಳಲ್ಲಿ ಚಿತ್ರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡೆ.ರಾಜ್‍ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್‍ನಲ್ಲಿ ಎಲ್ಲ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದೆ. ನನ್ನ ಸ್ವಂತ ಬ್ಯಾನರ್‍ಅನ್ನು ರಾಜ್‍ಕುಮಾರ್ ಅಭಿನಯದ ಶ್ರೀನಿವಾಸ ಕಲ್ಯಾಣದ ಮೂಲಕ ಆರಂಭಿಸಿ ನಿರ್ಮಾಣ ಕ್ಷೇತ್ರಕ್ಕೂ ಮುನ್ನಡಿ ಇಟ್ಟೆ.

ಮುಂದೆ 25 ಚಿತ್ರಗಳನ್ನು ನಿರ್ಮಾಣ ಮಾಡಿದ್ದಲ್ಲದೆ 35 ಸಿನಿಮಾಗಳ ವಿತರಣೆ, 45 ಚಿತ್ರಮಂದಿರಗಳನ್ನು ನಡೆಸುತ್ತ ಬಂದಿದ್ದೇನೆ. ನಾನು ಹುಟ್ಟಿ ಬೆಳೆದದ್ದು ಅವಿಭಕ್ತ ಕುಟುಂಬದಲ್ಲಿ.8 ಜನ ಮಕ್ಕಳಲ್ಲಿ ನನ್ನ ಅಕ್ಕ ಪಾರ್ವತಮ್ಮ ಎರಡನೆಯವರು.ಸಾಲಿಗ್ರಾಮ ನಮ್ಮ ಊರು ಎಂದು ಸ್ಮರಿಸಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ