ದಾಂಪತ್ಯ ಜೀವನಕ್ಕೆ ಕಾಲಿಟ್ಟ ರವಿಚಂದ್ರನ್‍ರವರ ಸುಪುತ್ರಿ ಗೀತಾಂಜಲಿ

ಬೆಂಗಳೂರು, ಮೇ. 29- ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಮತಿ ಅವರ ಸುಪುತ್ರಿ ಗೀತಾಂಜಲಿ ಇಂದು ಅಜಯ್ ಅವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಗರದ ಅರಮನೆ ಆವರಣದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಮುಹೂರ್ತ ನೆರವೇರಿದ್ದು, ರವಿಚಂದ್ರನ್ ದಂಪತಿ ಮಗಳನ್ನು ಉದ್ಯಮಿ ಅಜಯ್ ಅವರಿಗೆ ಧಾರೆಯೆರೆದು ಕೊಟ್ಟರು.

ಕೆಂಪು ಮತ್ತು ಗೋಲ್ಡ್ ಬಣ್ಣದ ಸೀರೆಯಲ್ಲಿ ಮದುಮಗಳು ಗೀತಾಂಜಲಿ ಕಂಗೊಳಿಸಿದರೆ. ಮದುಮಗ ಅಜಯ್ ಗೋಲ್ಡ್‍ನ ಡ್ರೆಸ್‍ನಲ್ಲಿ ಕಣ್ಮನ ಸೆಳೆದರು.

ಕನ್ನಡ ಚಿತ್ರರಂಗದಲ್ಲೇ ವಿಶಿಷ್ಠ ಸೆಟ್‍ಗಳನ್ನೂ ಚಿತ್ರಗಳಲ್ಲಿ ಅಳವಡಿಸಿ ಚಿತ್ರ ರಸಿಕರಿಗೆ ರಸದೌತನ ನೀಡುತ್ತಿದ್ದ ಮಗಳ ಮದುವೆಯ ಮಂಟಪವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.

ನಿನ್ನೆ ಸಂಜೆ ಆರಕ್ಷತೆಯೂ ವಿಜೃಂಭಣೆಯಿಂದ ನೆರವೇರಿದ್ದು, ಸೂಪರ್ ಸ್ಟಾರ್ ರಜನೀಕಾಂತ್, ಶಿವರಾಜ್‍ಕುಮಾರ್, ಪುನೀತ್‍ರಾಜ್, ಚಿರಂಜೀವಿ ಸರ್ಜಾ, ಶೃತಿ ಸೇರಿದಂತೆ ಸ್ಯಾಂಡಲ್‍ವುಡ್, ಕಾಲಿವುಡ್, ಟಾಲಿವುಡ್‍ನ ಗಣ್ಯರು ಹಾಗೂ ರಾಜಕೀಯ ಮುಖಂಡರು ಮದುವೆ ಸಮಾರಂಭಕ್ಕೆ ಆಗಮಿಸಿ ವಧು-ವರರಿಗೆ ಶುಭಾಷಯ ಕೋರಿದರು.

ಸಂಜೆ ನಾದಬ್ರಹ್ಮ ಹಂಸಲೇಖ ಅವರ ತಂಡದಿಂದ ಸಂಗೀತ ಕಾರ್ಯಕ್ರಮವು ಬಹಳ ಅದ್ಧೂರಿಯಾಗಿ ನೆರವೇರಿತು.

ಇಂದು ಸಹ ಚಿತ್ರೋದ್ಯಮದ ನಟ-ನಟಿಯರು ಆಗಮಿಸಿದ್ದರು.ಭಕ್ಷ ಭೋಜನವನ್ನು ಕೂಡ ಸಿದ್ಧಪಡಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ