ಜನರ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡುತ್ತೇನೆ-ಸಂಸದೆ ಸುಮಲತಾ ಅಂಬರೀಶ್

ಬೆಂಗಳೂರು, ಮೇ. 29-ಜನರ ತೀರ್ಮಾನದಂತೆ ನನ್ನ ಮುಂದಿನ ಹೆಜ್ಜೆ ಇಡುತ್ತೇನೆ. ನನ್ನ ಜವಾಬ್ದಾರಿಯನ್ನು ನಾನು ಸಂಪೂರ್ಣವಾಗಿ ನಿಭಾಯಿಸುತ್ತೇನೆ ಎಂದು ಮಂಡ್ಯ ಕ್ಷೇತ್ರದ ನೂತನ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ನಗರದ ಕಂಠೀರವ ಸ್ಟುಡಿಯೋದ ಅಂಬರೀಶ್ ಸಮಾಧಿಗೆ ಹುಟ್ಟುಹಬ್ಬದ ಅಂಗವಾಗಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನನಗೆ ಸಿಕ್ಕಿರುವ ಸ್ಥಾನಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಮಂಡ್ಯ ಅಭಿವೃದ್ಧಿ ಪರ ನಿಲ್ಲುತ್ತೇನೆ ಎಂದರು.

ಸಮಾವೇಶದ ನಂತರ ಜನರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ನಾನು ಈ ಮೊದಲೇ ಚರ್ಚೆ ನಡೆಸಿದ್ದು ಮಂಡ್ಯದ ಬೆಳವಣಿಗೆ ಬಗ್ಗೆ ಸಾಕಷ್ಟು ರೂಪುರೇಷೆಗಳನ್ನು ಹಾಕಿಕೊಂಡಿದ್ದೇವೆ. ಈಗ ಜಯ ಗಳಿಸಿರುವುದರಿಂದ ಅದನ್ನು ಸಾಕಾರಗೊಳಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

ಕಾವೇರಿ ನೀರಿನ ವಿಚಾರದಲ್ಲಿ ಎಲ್ಲರೂ ಒಂದಾದರೆ ಸಮಸ್ಯೆ ಬಗೆಹರಿಸಲು ಸಾಧ್ಯ. ಟೀಕೆ ಟಿಪ್ಪಣಿಗಳಿಗೆ ಪ್ರಕ್ರಿಯೆ ನೀಡಲು ನಾನು ಇಷ್ಟಪಡುವುದಿಲ್ಲ. ನನ್ನ ಕೆಲಸ ನಾನು ಮಾಡಲು ಇಷ್ಟಪಡುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ