ಇಂದು ಅಂಬರೀಶ್ ಹುಟ್ಟುಹಬ್ಬ ಹಿನ್ನಲೆ-ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ ಪತ್ನಿ ಸುಮಲತಾ

ಬೆಂಗಳೂರು, ಮೇ. 29- ಮಂಡ್ಯದ ಗಂಡು ಅಂಬರೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಅವರ ಸಮಾಧಿಗೆ ಪತ್ನಿ ಸುಮಲತಾ ಅಂಬರೀಶ್ ಪೂಜೆ ಸಲ್ಲಿಸಿದ್ದಾರೆ.

ಅಂಬರೀಶ್ ಅವರ 68ನೇ ಹುಟ್ಟುಹಬ್ಬದ ದಿನವಾದ ಇಂದು ಅವರ ಅಪಾರ ಅಭಿಮಾನಿಗಳು ಅವರ ಸಮಾಧಿ ಬಳಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆರೋಗ್ಯ ತಪಾಸಣೆ, ರಕ್ತದಾನದಂತಹ ಸಮಾಜಸೇವೆ ಕೆಲಸಗಳೊಂದಿಗೆ ಅಂಬರೀಶ್ ಅವರಿಗೆ ಇಷ್ಟವಾದ ಊಟ-ತಿಂಡಿ ಇಟ್ಟು ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ.

ಇದಕ್ಕಾಗಿಯೆ ಅವರ ಸಮಾಧಿಗೆ ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು.

ಅಂಬರೀಶ್ ಅವರ ಅಪಾರ ಅಭಿಮಾನಿಗಳ ದಂಡು ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ಬಂದು ಅವರಿಗಿಷ್ಟವಾದ ತಿಂಡಿ-ತಿನಿಸುಗಳನ್ನು ಸಮರ್ಪಿಸಿತು.

ಅಂಬಿ ಅವರ ಅಭಿಮಾನಿ ಸುಮಿತ್ರಾಬಾಯಿ ಎಂಬ ಮಹಿಳೆ ಗುಬ್ಬಿಯಿಂದ ತಂದ ಕಡಲೆಪುರಿ, ಬತ್ತಾಸು ಹಾಕಿ ಮಾಡಲಾಗಿದ್ದ ಹಾರವನ್ನು ಸುಮಲತಾ ಅವರಿಂದ ಅಂಬಿ ಸಮಾಧಿಗೆ ಹಾಕಿಸಿದರು.

ಒಂದು ವಾರಗಳ ಕಾಲ ತಯಾರಿಸಿದ ಈ ಹಾರವನ್ನು ಅಂಬಿ ಜನ್ಮದಿನದ ಅಂಗವಾಗಿ ತಂದು ಅಭಿಮಾನ ಮೆರೆದರು.

ಅಂಬರೀಶ್ ಅವರು ಇಲ್ಲದೆ ಆಚರಿಸುತ್ತಿರುವ ಅವರ ಮೊದಲ ಹುಟ್ಟುಹಬ್ಬ ಇದಾಗಿದ್ದೂ ಸುಮಲತಾ ಅವರು ಸಂಸದೆಯಾಗಿರುವುದು, ಸುಮಲತಾ ಅವರ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು, ಇಂದು ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸಲು ಸಮಾವೇಶ ನಡೆಯುತ್ತಿರುವುದು ಸೇರಿದಂತೆ ಅಂಬಿ ಪುತ್ರ ಅಭಿಷೇಕ್ ಅವರ ಮೊದಲ ಚಿತ್ರ ಇದೇ 31ರಂದು ಬಿಡುಗಡೆಯಾಗುತ್ತಿರುವ ಸಂಭ್ರಮದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಜರುಗುತ್ತಿವೆ.

ಈ ಸಂದರ್ಭದಲ್ಲಿ ಸುಮಲತಾ ಮಾತನಾಡಿ ಅಂಬರೀಷ್ ಅವರು ಇಲ್ಲದೆ ಆಚರಿಸುತ್ತಿರುವ ಈ ಹುಟ್ಟಿದ ಹಬ್ಬದಂದು ಅವರ ಅಪಾರ ಅಭಿಮಾನಿಗಳು ಸೇರಿದ್ದಾರೆ.

ಅವರು ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರ ಆಶೀರ್ವಾದದಿಂದಲೇ ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯವಾಗಿದೆ ಎಂದು ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ