ಮುಸ್ಲಿಂ ವ್ಯಕ್ತಿ ಮೇಲೆ ದುಷ್ಕರ್ಮಿಗಳ ಹಲ್ಲೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗೌತಮ್ ಗಂಭೀರ್ ಆಗ್ರಹ

ನವದೆಹಲಿ: ಮುಸ್ಲಿಂ ವ್ಯಕ್ತಿಗೆ ರಾಮನ ಹೆಸರನ್ನು ಜಪಿಸುವಂತೆ ಒತ್ತಾಯಿಸಿ ಆತನ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯನ್ನು ಖಂಡಿಸಿರುವ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿಯ ನೂತನ ಸಂಸದ ಗೌತಮ್​ ಗಂಭೀರ್, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗುರುಗ್ರಾಮದಲ್ಲಿ ಮುಸ್ಲಿಂ ಟೋಪಿ ಧರಿಸಿದ್ದನ್ನು ವಿರೋಧಿಸಿ, ಶ್ರೀ ರಾಮ ಮಂತ್ರವನ್ನು ಜಪಿಸುವಂತೆ ಒತ್ತಾಯಿಸಿ ಕೆಲವರು ಮುಸ್ಲಿಂ ವ್ಯಕ್ತಿಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ಈ ಹಲ್ಲೆಯನ್ನು ಖಂಡಿಸಿರುವ ಗಂಬೀರ್, ಇದರಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಗುರುಗ್ರಾಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನಾವು ಜ್ಯಾತ್ಯತೀತ ರಾಷ್ಟ್ರವನ್ನು ಹೊಂದಿದ್ದೇವೆ ಎಂದು ಗಂಭೀರ್​ ಟ್ವೀಟ್​ನಲ್ಲಿದ್ದಾರೆ.

ಕಳೆದ ಶನಿವಾರ ರಾತ್ರಿ ನಮಾಜ್‌ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಗುರುಗ್ರಾಮದ ದಾರಲ್‌ ಬಜಾರ್‌ ಲೇನ್‌ನಲ್ಲಿ ನಾಲ್ವರು ಯುವಕರು ತಾನು ಮುಸ್ಲಿಂ ಟೋಪಿ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನನ್ನ ಮೇಲೆ ಆಕ್ರಮಣ ಮಾಡಿದರು. ಈ ಪ್ರದೇಶದಲ್ಲಿ ಟೋಪಿಯನ್ನು ಧರಿಸುವಂತಿಲ್ಲ ಎಂದು ಬೆದರಿಕೆವೊಡ್ಡಿದರು. ಭಾರತ್‌ ಮಾತಾಕಿ ಜೈ ಎಂದು ಹೇಳುವಂತೆ ಒತ್ತಾಯಿಸಿ ನನ್ನ ಟೋಪಿಯನ್ನು ತೆಗೆದು ಕಪಾಳಮೋಕ್ಷ ಮಾಡಿದರು. ಅವರು ಹೇಳಿದಂತೆ ಭಾರತ್‌ ಮಾತಾಕಿ ಜೈ ಎಂದು ಕೂಗಿದೆ ಬಳಿಕ ಜೈ ಶ್ರೀರಾಮ್‌ ಎಂದು ಜಪಿಸುವಂತೆ ಹೇಳಿದರು. ನಾನು ನಿರಾಕರಿಸಿದೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಕೋಲನ್ನು ತೆಗೆದುಕೊಂಡು ಚೆನ್ನಾಗಿ ಥಳಿಸಿದರು. ನನ್ನ ಕಾಲು ಮತ್ತು ಬೆನ್ನಿಗೆ ಕರುಣೆ ಇಲ್ಲದಂತೆ ಬಾರಿಸಿದರು ಎಂದು ಮುಸ್ಲಿಂ ವ್ಯಕ್ತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಸಂತ್ರಸ್ತನಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಗುರುಗ್ರಾಮದ ಎಸಿಪಿ ರಾಜೀವ್ ಕುಮಾರ್‌ ತಿಳಿಸಿದ್ದಾರೆ.

deplorable bjps gautam gambhir on attack on muslim man in gurgaon

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ