ಈ ತಿಂಗಳಿನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಹಬ್ಬದ ವಾತವರಣ

ಬೆಂಗಳೂರು, ಮೇ 20- ಶುಭಾಶಯ ಶುಭಾಶಯ ನವ ವಧುವಿಗೂ, ನವ ವರನಿಗೂ ಶುಭಾಶಯ…. ಈ ದಿನ ಜನುಮದಿನ ಶುಭಾಶಯ ನಿಮಗೆ ಶುಭಾಶಯ…. ಇವು ಚಿತ್ರಗಳ ಗೀತೆಗಳಾಗಿದ್ದು ಈ ಗೀತೆಗಳಿಗೂ ನಮ್ಮ ಸ್ಯಾಂಡಲ್‍ವುಡ್ ಸೆಲಬ್ರಿಟಿಗಳಿಗೂ ಸ್ವಾಮ್ಯವಿದೆ.

ಸ್ಯಾಂಡಲ್‍ವುಡ್‍ನ ದೊಡ್ಮನೆಯಕುಡಿ ಯುವರಾಜ್‍ಕುಮಾರ್, ರೆಬೆಲ್‍ಸ್ಟಾರ್ ಅಂಬರೀಷ್ ಹಾಗೂ ಅವರ ಪುತ್ರ ಅಭಿಷೇಕ್, ಕ್ರೇಜಿಸ್ಟಾರ್ ರವಿಚಂದ್ರನ್, ಪುತ್ರಿ ಗೀತಾಂಜಲಿ ಅವರು ಈ ತಿಂಗಳಿನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಹಬ್ಬದ ವಾತಾವರಣ ನಿರ್ಮಿಸುತ್ತಿದ್ದಾರೆ.

ಹಸೆಮಣೆಯಲ್ಲಿ ಗುರು
ವರನಟ ಡಾ.ರಾಜ್‍ಕುಮಾರ್ ಅವರ ಕುಟುಂಬದಲ್ಲಿ ಈಗ ಸಡಗರವೋ ಸಡಗರ. ಶಿವರಾಜ್‍ಕುಮಾರ್ ಅವರ ಪುತ್ರಿಯ ವಿವಾಹ ನಂತರ ನಡೆಯುತ್ತಿರುವ 2ನೆ ಸಂಭ್ರಮ ಇದಾಗಿದೆ.

ಅಮ್ಮನ ಮನೆ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಖುಷಿಯಲ್ಲಿರುವ ನಟ ರಾಘವೇಂದ್ರರಾಜ್‍ಕುಮಾರ್ ಅವರ ಕಿರಿಯ ಪುತ್ರ ಯುವರಾಜ್‍ಕುಮಾರ್ (ಗುರುರಾಜ್‍ಕುಮಾರ್) ಅವರಿಗೆ ಮೈಸೂರು ಮೂಲದ ಹುಡುಗಿ ಶ್ರೀದೇವಿ ಬೈರಪ್ಪರೊಂದಿಗೆ ನಿಶ್ಚಿತಾರ್ಥವಾಗಿದ್ದು ಈಗ ಹಸೆಮಣೆ ಏರುತ್ತಿದ್ದಾರೆ.

ಇದೇ 25 ಮತ್ತು 26 ರಂದು ಅರಮನೆ ಮೈದಾನದಲ್ಲಿ ವೈಭವೋಪೇತವಾಗಿ ಮದುವೆ ಸಮಾರಂಭ ಜರುಗಲಿದೆ. ರಾಜ್‍ಕುಮಾರ್‍ರ ಸ್ಟಾರ್ ಪುತ್ರರಾದ ಶಿವರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್ ಸೇರಿದಂತೆ ಚಿತ್ರೋದ್ಯಮದ ಹಳೆ, ಹೊಸ ತಲೆಮಾರಿನ ನಟರ ಸಮಾಗಮವೇ ಈ ಕಾರ್ಯಕ್ರಮದ ರಂಗನ್ನು ಹೆಚ್ಚಿಸಲಿದ್ದಾರೆ.

ಅಲ್ಲದೆ ಹೊರ ರಾಜ್ಯದ ಕಲಾವಿದರು, ತಂತ್ರಜ್ಞರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಗೀತಾಂಜಲಿ ವಿವಾಹ ಸಂಭ್ರಮ:
ಚಂದನವನದ ಕನಸುಗಾರ, ಕ್ರೇಜಿಸ್ಟಾರ್, ಪ್ರೇಮಲೋಕದ ಪ್ರಿನ್ಸಿಪಾಲ್ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಫೆಬ್ರುವರಿ 23 ರಂದು ಅಜಯ್‍ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಗೀತಾಂಜಲಿಯ ವಿವಾಹವು ಮೇ 28 ಹಾಗೂ 29 ರಂದು ಬೆಂಗಳೂರಿನ ಅರಮನೆಯಲ್ಲಿ ನಡೆಯಲಿದೆ.

ತಮ್ಮ ಚಿತ್ರಗಳಲ್ಲಿ ಭರ್ಜರಿ ಸೆಟ್‍ಗಳ ಮೂಲಕ ಗಮನ ಸೆಳೆದಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಗೀತಾಂಜಲಿ ಒಬ್ಬಳೇ ಮಗಳಾಗಿದ್ದು ಈಕೆಯ ಮದುವೆಯನ್ನು ಬಲು ವಿಜೃಂಭಣೆಯಿಂದ ನೆರವೇರಿಸುತ್ತಿದ್ದಾರೆ.

ಮದುವೆಯ ಆಮಂತ್ರಣದಲ್ಲೇ ತಮ್ಮ ಜಾಣ್ಮೆಯನ್ನು ಮೆರೆದಿರುವ ರವಿ, ಕರೆಯೋಲೆಯಲ್ಲಿ ತಮ್ಮ ಪೋಟೋವನ್ನು ಪ್ರಕಟಿಸಿದ್ದು ತಮ್ಮ ಕುಟುಂಬದವರ ಹೆಸರನ್ನು ಪ್ರಕಟಿಸಿರುವುದೇ ಅಲ್ಲದೆ ಅದಕ್ಕೆ 3ಡಿ ಸ್ಪರ್ಶ ನೀಡಿದ್ದಾರೆ. ಈ ರೀತಿಯ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮಾಡಿಸಿರುವ ಕನ್ನಡ ಚಿತ್ರರಂಗದವರ ಪೈಕಿ ರವಿಯೇ ಫಸ್ಟ್.

ಈಗಾಗಲೇ ಸ್ಯಾಂಡಲ್‍ವುಡ್‍ನ ತಾರೆಯರು, ರಾಜಕಾರಣಿಗಳು ಸೇರಿದಂತೆ ಗಣ್ಯಾತಿಗಣ್ಯರಿಗೆ ರವಿಚಂದ್ರನ್ ದಂಪತಿ ಆಮಂತ್ರಣವನ್ನು ನೀಡಿದ್ದಾರೆ.

ಅಮಿತಾಭ್‍ಬಚ್ಚನ್, ರಜನಿಕಾಂತ್, ಚಿರಂಜೀವಿ, ಜೂಹಿಚಾವ್ಲಾ, ಖುಷ್ಬೂ ಸೇರಿದಂತೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗು ಮಾಳಿವುಡ್‍ನ ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಲಿದ್ದಾರೆ.

ವಿಶೇಷವೆಂದರೆ ಮಗಳು ಗೀತಾಂಜಲಿ ಮದುವೆ ಮುಗಿದ ಮರು ದಿನವೇ (ಮೇ 30) ರವಿಚಂದ್ರನ್‍ರ ಹುಟ್ಟುಹಬ್ಬವಿರುವುದರಿಂದ ರವಿ ಕುಟುಂಬದ ಹಾಗೂ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ. ಮಗಳ ಮದುವೆಯಲ್ಲಿ ಬಿಜಿಯಿರುವ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತೇನೆ ಎಂದು ರವಿ ಹೇಳಿದ್ದಾರೆ.

ಅಮರ್ ಎಂಟ್ರಿ
ಚಂದನವನದಲ್ಲಿ ರೆಬೆಲ್ ಪಾತ್ರಗಳನ್ನು ನಿರ್ವಹಿಸುತ್ತಲೇ ರೆಬೆಲ್‍ಸ್ಟಾರ್ ಎಂದು ಬಿರುದಾಂಕಿತರಾಗಿರುವ ಅಮರ್ (ಅಂಬರೀಷ್) ಅವರ ಜನುಮದಿನವಾದ ಮೇ 29ರಂದು ಆಚರಿಸಲು ಅಭಿಮಾನಿಗಳು ಪ್ಲ್ಯಾನ್ ಮಾಡಿಕೊಂಡಿರುವ ಬೆನ್ನಲ್ಲೇ ಅಂಬಿ ಪುತ್ರ ಅಭಿಷೇಕ್ ನಟಿಸಿರುವ ಚೊಚ್ಚಲ ಚಿತ್ರ ಅಮರ್ ಮೇ 31 ರಂದು ರಿಲೀಸಾಗುತ್ತಿದ್ದು ಅಂಬಿ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ.

ಕಳೆದ ವರ್ಷ ರೆಬೆಲ್‍ಸ್ಟಾರ್‍ರ ಹುಟ್ಟುಹಬ್ಬದಂದೇ ಅಮರ್ ಸಿನಿಮಾ ಸೆಟ್ಟೇರುವ ಮೂಲಕ ಅಂಬಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದ ಚಿತ್ರತಂಡವು ಈ ವರ್ಷ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಅಂಬಿಗೆ ಗೌರವ ಸೂಚಿಸಲಿದೆ.

ನಾಗಶೇಖರ್ ನಿರ್ದೇಶಿಸಿರುವ ಅಮರ್ ಚಿತ್ರದಲ್ಲಿ ಅಭಿಷೇಕ್‍ಗೆ ತಾನ್ಯಾಹೋಪ್ ನಾಯಕಿಯಾಗಿ ನಟಿಸಿದ್ದರೆ, ರಚಿತಾರಾಮ್, ದೇವರಾಜ್, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿರುವುದು ಅಮರ್ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ಹುಟ್ಟುಹಬ್ಬ, ಮದುವೆ ಸಂಭ್ರಮ ಹಾಗೂ ಚಿತ್ರ ಬಿಡುಗಡೆ ಹೀಗೆ ನಾನಾ ಕಾರಣಗಳಿಂದ ಸ್ಯಾಂಡಲ್‍ವುಡ್‍ನ ಅಂಗಳದಲ್ಲಿ ಸಂಭ್ರಮ ಮನೆ ಮಾಡಿದೆ.

ರಾಘವೇಂದ್ರರಾಜ್‍ಕುಮಾರ್‍ರ ಎರಡನೆ ಪುತ್ರ ಯುವರಾಜನ ಮದುವೆ- ಮೇ 26
ರವಿಚಂದ್ರನ್ ಪುತ್ರಿ ಗೀತಾಂಜಲಿಯ ಮದುವೆ- ಮೇ 29
ರೆಬೆಲ್‍ಸ್ಟಾರ್ ಅಂಬರೀಷ್ ಜನ್ಮದಿನ- ಮೇ 29
ರವಿಚಂದ್ರನ್ ಹುಟ್ಟುಹಬ್ಬ- ಮೇ 30
ಅಮರ್ ಚಿತ್ರ ಬಿಡುಗಡೆ- ಮೇ 31

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ