ರಾಜ್ಯಕ್ಕಿಲ್ಲ ಮುಂಗಾರು ಮಳೆ; ಮುಂದುವರೆಯಲಿರುವ ಬರ, ಶಾಕ್ ನೀಡಿದ ಹವಾಮಾನ ಇಲಾಖೆ ವರದಿ

ಬೆಂಗಳೂರು:  ರಾಜ್ಯ ಹಿಂದೆಂದೂ ಕಾಣದ ಬರಕ್ಕೆ ತುತ್ತಾಗಿದೆ. ಸುಮಾರು 149 ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದೆ. ಈ ಭಾಗಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದ್ದು, ನೀರು-ಮೇವಿಲ್ಲದೆ ಜಾನುವಾರುಗಳು ಸಾವಿಗೀಡಾಗುತ್ತಿವೆ. ಈ ನಡುವೆ ಜೂನ್ ತಿಂಗಳ ಮುಂಗಾರು ಮಳೆಯೂ ಸಹ ಸಾಮಾನ್ಯಕ್ಕಿಂತ ಕಡಿಮೆ ಬೀಳಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು ರಾಜ್ಯದಲ್ಲಿ ಬರ ಮುಂದುವರೆಯುವ ಭೀತಿ ಎದುರಾಗಿದೆ.

ಭಾರತೀಯ ಹವಾಮಾನ ಇಲಾಖೆ ಮತ್ತು ‘ಸ್ಕೈಮೆಟ್’ ಪ್ರತ್ಯೇಕವಾಗಿ ಬಿಡುಗಡೆ ಮಾಡಿರುವ ವರದಿಯಲ್ಲಿ, “ಕರ್ನಾಟಕ ಮಾತ್ರವಲ್ಲದೆ ದೇಶದ ಇತರೆಡೆಯೂ ಈ ವರ್ಷ ನಿರೀಕ್ಷಿತ ಮಳೆಯಾಗುವುದಿಲ್ಲ. ಜೂನ್ ತಿಂಗಳಿಂದ ಸೆಪ್ಟೆಂಬರ್​ವರೆಗಿನ ನೈರುತ್ಯ ಮುಂಗಾರು ಮಳೆ ಇಡೀ ದೇಶದಲ್ಲೇ ಸಾಮಾನ್ಯದ ಸಮೀಪಕ್ಕೂ ಬರುವುದಿಲ್ಲ. ಹೀಗಾಗಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸ್ಕೈಮೆಟ್ ವೆದರ್’ ವರದಿಯ ಪ್ರಕಾರ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ 887 ಮಿ.ಮೀ ಮಳೆ ಆಗಲಿದೆ. ವಾರ್ಷಿಕ ಸರಾಸರಿ ಮಳೆ ಪ್ರಮಾಣ ಶೇ.96 ರಿಂದ ಶೇ. 104 ಇದ್ದರೆ ಅದು ಸಾಮಾನ್ಯ ಮಳೆ ವ್ಯಾಪ್ತಿಗೆ ಬರುತ್ತದೆ. ಸ್ಕೈಮೆಟ್ ಲೆಕ್ಕಾಚಾರದಂತೆ ಎಲ್​ಪಿಎ ಶೇ.93ರಷ್ಟು ಎಂದರೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದೇ ಅರ್ಥ. ಅಲ್ಲದೆ, ಜೂನ್​ನಿಂದ ಸೆಪ್ಟೆಂಬರ್​ವರೆಗೆ ಸಾಮಾನ್ಯ ಮಳೆ ಶೇ.30ರಷ್ಟು ಸಾಧ್ಯತೆ ಇದ್ದರೆ, ಸಾಮಾನ್ಯಕ್ಕಿಂತ ಕಡಿಮೆ ಶೇ.55ರಷ್ಟು ಎಂದು ನಿರೀಕ್ಷಿಸಲಾಗಿದೆ.

ಹಿಂದೂ ಮಹಾಸಾಗರದ ಮೇಲ್ಮೈನ ತಾಪಮಾನದ ಮೇಲೆ ನಿರಂತರ ನಿಗಾ ಇಡಲಾಗಿದೆ. ಇದು ಮುಂಗಾರು ಮಳೆಯ ಮೇಲೆ ಪ್ರಬಲ ಪರಿಣಾಮ ಬೀರಲಿದೆ. ಒಂದು ವೇಳೆ ಮಾರುತಗಳು ಚದುರಿ ಹಂಚಿಕೆಯಾಗಿ ಎಲ್ಲೆಡೆ ಮಳೆಯಾದರೆ, ರೈತರಿಗೆ ಕೃಷಿ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮುಂದಿದೆ ಕಠಿಣ ಪರಿಸ್ಥಿತಿಸ್ಕೈಮೆಟ್ ವರದಿ ನಿಜವೇ ಆದರೆ, ಈ ಬಾರಿ ರಾಜ್ಯದಲ್ಲಿ ನಿರೀಕ್ಷೆಯಂತೆ ಸಮರ್ಪಕ ಮಳೆಯಾಗುವ ಸಾಧ್ಯತೆ ಇಲ್ಲ.

ಈಗಾಗಲೇ ಬರಗಾಲದಿಂದಾಗಿ ಸಾಕಷ್ಟು ನಲುಗಿ ಹೋಗಿರುವ ರಾಜ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಲಿರುವುದು ಬಹುತೇಕ ಖಚಿತವಾಗಿದೆ.

ಮಳೆಯಿಲ್ಲದೆ ರಾಜ್ಯದ ಜಲಾಶಯಗಳು ತುಂಬುವುದಿಲ್ಲ. ಅಂತರ್ಜಲವೂ ವೃದ್ಧಿಯಾಗುವುದಿಲ್ಲ. ಹಾಗೂ ಮಳೆಯಲ್ಲಿ ಕೊರತೆ ಉಂಟಾದರೆ ರಾಜ್ಯಾದ್ಯಂತ ಕೃಷಿ ಬಿತ್ತನೆಯ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಮೇ ತಿಂಗಳ ಅಂತ್ಯದಲ್ಲಿ ಉತ್ತಮ ಮಳೆ ಬೀಳಲಿದಿದ್ದರೆ ಜಲಾಶಯಗಳಿಗೆ ಒಳ ಹರಿವು ಕಡಿಮೆಯಾಗುತ್ತದೆ. ಮೇ ಮತ್ತು ಜೂನ್ ಎರಡೂ ತಿಂಗಳು ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆಯಾದರಷ್ಟೆ ಜಲಾಶಯಗಳು ತುಂಬುತ್ತವೆ ಎನ್ನುತ್ತಾರೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ.

ಎಲ್ನಿನೊ ಪರಿಣಾಮದಿಂದಾಗಿ ಮಳೆ ಕೊರತೆದೇಶದಾದ್ಯಂತ ಮಳೆ ಕೊರತೆಯಾಗಲು ಎಲ್​ನಿನೊ ವೈಪರೀತ್ಯದ ಪರಿಣಾಮವೇ ಕಾರಣವೆಂದು ಭಾರತೀಯ ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

ಎನ್​ನಿನೊ ದುರ್ಬಲವಾಗಿದ್ದು, ಇದೇ ಪರಿಸ್ಥಿತಿ ಮುಂಗಾರು ಅವಧಿಯ ಉದ್ದಕ್ಕೂ ಮುಂದುವರೆಯಲಿದೆ. ಕೊನೆಯಲ್ಲಿ ತೀವ್ರತೆ ಕಡಿಮೆಯಾಗುತ್ತದೆ. ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಮೇಲ್ಮೈ ಉಷ್ಣಾಂಶದ ಮೇಲೆ ನಿಗಾ ಇಡಲಾಗಿದೆ. ಈ ವಾತಾವರಣವು ಭಾರತೀಯ ಮುಂಗಾರಿನ ಮೇಲೆ ಪರಿಣಾಮ ಬಿರಲಿದೆ.

ಆಸ್ಟ್ರೇಲಿಯಾದ ವಿಜ್ಞಾನಿಗಳು ಸುಮಾರು 400 ವರ್ಷಗಳ ಎನ್​ನಿನೊ ಬದಲಾವಣೆಯ ಬಗ್ಗೆ ಅಧ್ಯಯನ ನಡೆಸಿದ್ದು, ಇತ್ತೀಚಿನ ದಶಕಗಳಲ್ಲಿ ಎಲ್​ನಿನೊ ವರ್ತನೆಯಲ್ಲಿ ಭಾರೀ ಬದಲಾವಣೆ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ.

ಹವಳದ ಉಳಿಕೆಗಳಲ್ಲಿ ಹುದುಗಿಕೊಂಡಿರುವ ಎಲ್​ನಿನೊಗಳ ರಾಸಾಯನಿಕ ಕುರುಹುಗಳನ್ನು ಗುರುತಿಸಿ ಪ್ರತಿಯೊಂದು ಎನ್​ನಿನೊವಿನ ವರ್ತನೆಯನ್ನು ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ. ಇದು ಅಸಾಧ್ಯವೆಂದೇ ಇಲ್ಲಿಯವರೆಗೆ ಎಲ್ಲರೂ ನಂಬಿದ್ದರು. ಎಲ್​ನಿನೊ ಘಟಿಸಿದಾಗ ಹವಳದೊಂದಿಗೆ ಕೂಡಿಕೊಳ್ಳುವಾಗ ರಾಸಾಯನಿಕ ಅಂಶಗಳು ವಿಶಿಷ್ಟವಾಗಿರುತ್ತವೆ. ಎಲ್​ನಿನೊವಿನ ಈ ವರ್ತನೆ ಹವಾಮಾನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅದರ ಫಲವನ್ನು ಸಮಾಜ ಉಣ್ಣಲೇಬೇಕಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ