ಟಿಡಿಆರ್ ಹಗರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಎಸಿಬಿ ಪೊಲೀಸರು

ಬೆಂಗಳೂರು,ಮೇ4- ನಗರದ ಟಿಡಿಆರ್ ಹಗರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಪೊಲೀಸರು ವಾಲ್‍ಮಾರ್ಟ್ ಖಾಸಗಿ ಕಂಪನಿಯ ಪ್ರಮುಖರ ಮನೆ ಮತ್ತು ಕಚೇರಿ ಸೇರಿದಂತೆ ಐದು ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ರಸ್ತೆವೊಂದರ ಅಗಲೀಕರಣದ ಟಿಡಿಆರ್‍ನಲ್ಲಿ ಭಾರೀ ಹಗರಣ ನಡೆದಿದೆ ಎಂದು ದೂರು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು ಬಿಡಿಎ ಸಹಾಯಕ ಇಂಜಿನಿಯರ್ ಕೃಷ್ಣಲಾಲ್ ಅವರ ಆಪ್ತರಾದ ದೀಪಕ್‍ಕುಮಾರ್, ಅಮಿತ್ ರಿಕಬ್ ಚಂದ್ ಜೈನ್ ಎಂಬುವರ ಮನೆ ಮೇಲೆ ಈಗಾಗಲೇ ದಾಳಿ ನಡೆಸಿದ್ದರು.

ಇಂದು ವಾಲ್‍ಮಾರ್ಟ್ ರಿಯಾಲಿಟಿ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾದ ರತನ್ ಬಾಬುಲಾಲ್ ಲಾತ್, ವ್ಯವಸ್ಥಾಪಕರಾದ ಅಮಿತ್ ಜೆ.ಬೋಳಾರ್, ಕಂಪನಿಯ ಏಜೆಂಟರ್‍ಗಳಾದ ಮುನಿರಾಜು, ಗೌತಮ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಎಸ್ಪಿ ಸಂಜೀವ್ ಪಾಟೀಲ್ ಮಾರ್ಗದರ್ಶನ, ಡಿವೈಎಸ್ಪಿ ರವಿಕುಮಾರ್ ನೇತೃತ್ವದಲ್ಲಿ 5 ತಂಡಗಳ ಎಸಿಬಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದಲೂ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ರತನ್‍ಲಾಲ್ ಅವರ ಎನ್‍ಕ್ಲೈವ್ ಫ್ಲಾಟ್ ಮೇಲೆ, ರೆಸಿಡೆನ್ಸಿ ರಸ್ತೆಯಲ್ಲಿರುವ ಅವರ ಕಚೇರಿ, ಇಂದಿರಾನಗರದಲ್ಲಿರುವ ಅಮಿತ್ ಬೋಳಾರ್ ಅವರ ಮನೆ, ಕಲ್ಕೆರೆಯಲ್ಲಿರುವ ಮುನಿರಾಜು ಹಾಗೂ ಕಲ್ಕೆರೆ ಮುಖ್ಯರಸ್ತೆಯ ಹೊರಮಾವಿನಲ್ಲಿರುವ ಗೌತಮ್ ಮನೆಗಳ ಮೇಲೆ ದಾಳಿ ನಡೆದಿದೆ.

ಟಿಡಿಆರ್ ಹಗರಣದಲ್ಲಿ ಈವರೆಗೂ ಸುಮಾರು 8 ಮಂದಿ ಆರೋಪಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಎಲ್ಲ ಆರೋಪಿಗಳು ತಲೆತಪ್ಪಿಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ. ಇಂದು ನಡೆದ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಬಿಎಂಪಿ ಇಂಜಿನಿಯರ್ ಆಗಿದ್ದ ಪ್ರಮುಖ ಆರೋಪಿ ಕೃಷ್ಣಲಾಲ್ ಅಕ್ರಮವಾಗಿ ನೀಡುತ್ತಿದ್ದ ಟಿಡಿಆರ್‍ನ್ನು ವಾಲ್‍ಮಾರ್ಟ್ ಕಂಪನಿ ಮೂಲಕ ಪರಭಾರೆ ಮಾಡುತ್ತಿದ್ದು, ಬಹಳಷ್ಟು ದೊಡ್ಡ ದೊಡ್ಡ ಬಿಲ್ಡರ್‍ಗಳಿಗೆ, ರಿಯಲ್ ಎಸ್ಟೇಟ್ ಕಂಪನಿಗಳಿಗೆ ಟಿಡಿಆರ್‍ನ್ನು ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

ವಾಲ್‍ಮಾರ್ಟ್ ಕಂಪನಿ ಮೂಲಕ ವ್ಯವಹರಿಸಲಾದ ಎಲ್ಲ ಟಿಡಿಆರ್‍ಗೂ ಅಮಿತ್ ಬೋಳಾರ್ ಸಹಿ ಹಾಕಿದ್ದಾರೆ. ಟಿಡಿಆರ್ ಹಗರಣದಲ್ಲಿ ಬಿಬಿಎಂಪಿಗೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ.

ದಾಳಿಯ ವೇಳೆ ಹಲವಾರು ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ