ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿದ ನಂತರ ಪ್ರಸಾದ ವಿತರಣೆ

ಬೆಂಗಳೂರು, ಏ.30-ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಇನ್ನು ಮುಂದೆ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸದೆ ಭಕ್ತರಿಗೆ ಪ್ರಸಾದ ವಿತರಿಸುವಂತಿಲ್ಲ.

ಏಕೆಂದರೆ ರಾಜ್ಯ ಸರ್ಕಾರ ಇನ್ನೆರಡು ದಿನಗಳಲ್ಲಿ ಹೊಸ ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತರಲಿದೆ. ಇದರ ಪ್ರಕಾರ ಮುಂದಿನ ದಿನಗಳಲ್ಲಿ ಮುಜರಾಯಿ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ಆರೋಗ್ಯಾಧಿಕಾರಿ ಪ್ರಸಾದವನ್ನು ತಪಾಸಣೆ ನಡೆಸಿದ ಬಳಿಕವಷ್ಟೇ ಭಕ್ತರಿಗೆ ವಿತರಣೆ ಮಾಡಬೇಕು.

ರಾಜ್ಯದಲ್ಲಿ ಇತ್ತೀಚೆಗೆ ಪ್ರಸಾದ ಸೇವನೆಯಿಂದಾಗಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಂಡಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡದ ದೇವಸ್ಥಾನಗಳಲ್ಲಿ ಆಯಾ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಪ್ರಸಾದವನ್ನು ತಪಾಸಣೆ ನಡೆಸಿ ವಿತರಣೆ ಮಾಡುವುದು ಸೂಕ್ತ ಎಂದು ಸರ್ಕಾರ ಮನವಿ ಮಾಡಲಿದೆ. ಆದರೆ ಇಲ್ಲಿ ಕಡ್ಡಾಯವಾಗಿ ತಪಾಸಣೆ ಮಾಡಬೇಕೆಂಬ ನಿಯಮ ಇರುವುದಿಲ್ಲ.

ಕಳೆದ ಡಿಸೆಂಬರ್‍ನಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಭಕ್ತರು ತೀವ್ರ ಅಸ್ವಸ್ಥಗೊಂಡಿದ್ದರು. ದೇವಾಲಯದ ಆಡಳಿತ ಮಂಡಳಿಯಲ್ಲಿ ಉಂಟಾಗಿದ್ದ ವೈಯಕ್ತಿಕ ಸಂಘರ್ಷದಿಂದ ಕೆಲ ಕಿಡಿಗೇಡಿಗಳು ದೇವಾಲಯದ ಪ್ರಸಾದದಲ್ಲಿ ವಿಷ ಬೆರೆಸಿರುವುದು ತನಿಖೆಯಿಂದ ರುಜುವಾತಾಗಿತ್ತು.

ಈ ಘಟನೆ ಮಾಸುವ ಮುನ್ನವೇ ಕಳೆದ ಜನವರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿರುವ ಗಂಗಭವಾನಿ ದೇವಸ್ಥಾನದಲ್ಲಿ ವಿಷ ಪ್ರಾಶನದ ಪ್ರಸಾದ ಸೇವಿಸಿದ ಪರಿಣಾಮ ಇಬ್ಬರು ಮೃತಪಟ್ಟು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು.

ಮೂರು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚೆನ್ನಮ್ಮನಹಳ್ಳಿ ಆಂಜನೇಯ ದೇವಾಲಯದಲ್ಲಿ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವಾಲಯದ ಆಡಳಿತ ಮಂಡಳಿಯ ವೈಯಕ್ತಿಕ ಹಿತಾಸಕ್ತಿ ಇಲ್ಲವೆ, ಗ್ರಾಮದಲ್ಲಿರುವ ಭಿನ್ನಾಭಿಪ್ರಾಯದಿಂದ ಕೆಲ ಕಿಡಿಗೇಡಿಗಳು ಪ್ರಸಾದದಲ್ಲಿ ವಿಷ ಬೆರೆಸುವಂತಹ ನೀಚ ಕೃತ್ಯವನ್ನು ನಡೆಸುತ್ತಾ ಬರುತ್ತಲೇ ಇದ್ದಾರೆ.ಇದಕ್ಕೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಹೊಸದೊಂದು ನಿಯಮಾವಳಿಯನ್ನು ಜಾರಿ ಮಾಡಲಿದೆ.

ಹೊಸ ಮಾರ್ಗಸೂಚಿ:
ಹೊಸ ಮಾರ್ಗಸೂಚಿ ಪ್ರಕಾರ ಮುಜರಾಯಿ ದೇವಾಲಯಗಳಲ್ಲಿ ಯಾರೇ ಆದರೂ ಭಕ್ತರಿಗೆ ಪ್ರಸಾದ ವಿತರಿಸುವ ಮುನ್ನ ತಾಲೂಕಿನ ವೈದ್ಯಾಧಿಕಾರಿಗಳಿಂದ ತಪಾಸಣೆ ಮಾಡಬೇಕು. ಪ್ರಸಾದ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಖಾತ್ರಿ ಪಡಿಸಿದ ಬಳಿಕವೇ ಭಕ್ತರಿಗೆ ವಿತರಿಸಬೇಕು.

ರಾಜ್ಯದಲ್ಲಿ ಮುಜರಾಯಿ ವ್ಯಾಪ್ತಿಗೆ ಒಳಪಡುವ ಸುಮಾರು 35 ಸಾವಿರ ದೇವಾಲಯಗಳಿವೆ. ಇವುಗಳನ್ನು 3 ವರ್ಗಗಳನ್ನಾಗಿ ವಿಭಾಗಿಸಲಾಗಿದೆ.

ವಾರ್ಷಿಕ 25 ಲಕ್ಷಕ್ಕಿಂತ ಹೆಚ್ಚು ವರಮಾನವಿರುವ 175 ದೇವಸ್ಥಾನಗಳನ್ನು ಎ ವರ್ಗ ಎಂದು ಪರಿಗಣಿಸಲಾಗಿದೆ.

ವಾರ್ಷಿಕ 5 ಲಕ್ಷದಿಂದ 25ಲಕ್ಷದೊಳಗೆ ಆದಾಯ ವಿರುವ ಸುಮಾರು 163 ದೇವಸ್ಥಾನಗಳನ್ನು ಬಿ ದರ್ಜೆಗೆ ಸೇರಿಸಲಾಗಿದೆ.

ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ದೇವಾಲಯಗಳನ್ನು ಸಿ ದರ್ಜೆಗೆ ಸೇರ್ಪಡೆ ಮಾಡಲಾಗಿದೆ.2012ರಲ್ಲಿ ಮುಜರಾಯಿ ಇಲಾಖೆ ತಂದಿರುವ ನೂತನ ನಿಯಮಾವಳಿಗಳ ಪ್ರಕಾರ ಪ್ರಸಾದ ವಿತರಣೆಗೆ ಬಳಸುವ ಆಹಾರ ಸಾಮಗ್ರಿಗಳು ಉತ್ತಮವಾದ ಗುಣಮಟ್ಟದಿಂದ ಕೂಡಿರಬೇಕು.ಕಳಪೆ ವಸ್ತುಗಳನ್ನು ಬಳಸಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.

ರಾಜ್ಯದಲ್ಲಿ ಇತ್ತೀಚೆಗೆ ಪ್ರಸಾದಕ್ಕೆ ವಿಷ ಬೆರೆಸುವಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಮುಜರಾಯಿ ವ್ಯಾಪ್ತಿಗೆ ಒಳಪಡುವ ಹೊಸ ನಿಯಮಾವಳಿಗಳನ್ನು ಜಾರಿ ಮಾಡಲಿದೆ. ಇನ್ನೆರಡು ದಿನಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್‍ನಾಯ್ಕ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ