ಧೋನಿ ಇಲ್ಲದಿದ್ರೆ ಗೆಲುವಿನ ದಡ ಸೇರಲ್ಲ ಚೆನ್ನೈ: ತಲೈವಾ ಇಲ್ಲದಿದ್ರೆ ಚೆನ್ನೈಗಿಲ್ಲ ಜೋಶ್

ಚೆನ್ನೈ ತಲೈವಾ ಧೋನಿ ಇಲ್ಲದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದೆ ಸಾಗೋದಿಲ್ಲ ಅನ್ನೋದು ಇದೀಗ ಮತ್ತೊಮ್ಮೆ ಪ್ರೂವ್ ಆಗಿದೆ.

ಹೌದು ನಾವಿಕನಿಲ್ಲದೇ ಧೋಣಿ ಹೇಗೆ ದಡ ಸೇರೋದಿಲ್ವೊ ಹಾಗೆ ಧೋನಿ ಇಲ್ಲದಿದ್ದರೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲೋದಿಲ್ಲ ಅನ್ನೋ ಕಹಿ ಸತ್ಯ ಜಗಜ್ಜಾಹೀರಾಗಿದೆ.

ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಷ್ಟು ಸ್ಟ್ರಾಂಗ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ .ಮೂರು ಬಾರಿ ಟ್ರೋಫಿ ಗೆದ್ದಿರುವ ಈ ಹಾಲಿ ಚಾಂಪಿಯನ್ಸ್, ಆಡಿದ ಪ್ರತಿ ಐಪಿಎಲ್ನಲ್ಲೂ ಪ್ಲೇ ಆಫ್ ಪ್ರವೇಶಿಸಿದೆ.ಈ ಮೂಲಕ ಈ ಸಾಧನೆ ಮಾಡಿದ ಏಕೈಕ ತಂಡ ಎಂಬ ಹೆಗ್ಗಳಿಕೆ ಹೊಂದಿದೆ.ಈ ಸೀಸನ್ನಲ್ಲೂ ಉತ್ತಮ ಪ್ರದರ್ಶನ ನೀಡ್ತಿದೆ.

ಚೆನ್ನೈ ಸೋಲಿಗೆ ಕಾರಣವಾಯಿತು ಧೋನಿ ಅನುಪಸ್ಥಿತಿ
ಮೊನ್ನೆ ಚೆಪಾಕ್ ಅಂಗಳದಲ್ಲಿ ಮುಂಬೈ ಧೋನಿ ಕೋಟೆಗೆ ಬಂದು ಗೆದ್ದು ಬೀಗಿತ್ತು. ಚೆನ್ನೈ ಸೋಲಿಗೆ ಧೋನಿ ಅನುಪಸ್ಥಿತಿಯೇ ಕಾರಣವಾಗಿತ್ತು. ಜ್ವರದಿಂದ ಬಳಲಿದ ಕಾರಣ ಧೋನಿ ಮುಂಬೈ ವಿರುದ್ಧ ಆಡಿರಲಿಲ್ಲ. ಧೋನಿ ಇಲ್ಲದೇ ಆಡಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.ತವರಿನ ಅಂಗಳದಲ್ಲಿ ಆಡಿದ ಸಿಎಸ್ಕೆ, ಬ್ಯಾಟಿಂಗ್ ವೈಫಲ್ಯದಿಂದಾಗಿ 46 ರನ್ಗಳಿಂದ ಹೀನಾಯವಾಗಿ ರೋಹಿತ್ ಶರ್ಮಾ ಪಡೆಗೆ ಶರಣಾಯ್ತು.

ನಾಯಕತ್ವದಲ್ಲಿ ಮತ್ತೊಮ್ಮೆ ಎಡವಿದ್ರು ರೈನಾ
ಚೆನ್ನೈ ತಂಡದ ಪ್ರಮುಖ ಆಟಗಾರ ಪವರ್ ಹಿಟ್ಟರ್ ಸುರೇಶ್ ರೈನಾ ಮತ್ತೊಮ್ಮೆ ಎಡವಿದ್ದಾರೆ. ಟೂರ್ನಿಯಲ್ಲಿ ಎರಡನೇ ಬಾರಿಗೆ ನಾಯಕನಾಗಿ ತಂಡವನ್ನ ಮುನ್ನಡೆಸಿದ್ರು. ನಾಯಕತ್ವದಲ್ಲಿ ಸಂಪೂರ್ಣವಾಗಿ ಫ್ಲಾಪ್ ಆಗುವ ಜೊತೆಗೆ ಬ್ಯಾಟಿಂಗ್ನಲ್ಲೂ ವೈಫಲ್ಯ ಕಂಡರು.

ಮುಂಬೈ ವಿರುದ್ಧ ಚೆನ್ನೈ ಮೊನ್ನೆ ಆಡಿದ ರೀತಿ ನೋಡಿದ ಇದೇನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂತಾ ಹಿಡಿ ಶಾಪ್ ಹಾಕಿದ್ರು. ಧೋನಿ ಇಲ್ಲದಿದ್ರೆ ಚೆನ್ನೈ ತಂಡವೇ ಇಲ್ಲ ಅಂತ ಅಭಿಮಾನಿಗಳು ಮನವರಿಕೆ ಮಾಡಿಕೊಂಡ್ರು.

ಪ್ರಾಕ್ಟೀಸ್ ಮ್ಯಾಚ್ ಆಡಿದಂತೆ ಆಡಿದ ಚೆನ್ನೈ
ಮೊನ್ನೆ ಮುಂಬೈ ವಿರುದ್ಧ ಚೆನ್ನೈ ತಂಡ ಅಭ್ಯಾಸ ಪಂದ್ಯ ಆಡಿದಂತೆ ಇತ್ತು. ತಂಡದ ನಾಯಕನಾಗಿದ್ದ ಸುರೇಶ್ ರೈನಾ ನಾಯಕತ್ವದಲ್ಲಿ ಎಡವಿದ್ರೆ, ತಂಡದ ಬೌಲರ್ಸ್ಗಳು ಭಾರೀ ರನ್ಗಳನ್ನ ಬಿಟ್ಟುಕೊಟ್ಟು ದುಬಾರಿ ಬೌಲರ್ಸ್ಗಳಾದ್ರು. ಇನ್ನು ಬ್ಯಾಟಿಂಗ್ ಡಿಪಾರ್ಟ್ಮೆಂಟ್ನಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಿಂದ ಹಿಡಿದು ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿ ಸೋಲನ್ನ ಬೇಗನೇ ಒಪ್ಪಿಕೊಂಡ್ರು.

ಮೊನ್ನೆಯ ಪಂದ್ಯದಲ್ಲಿ ಚೆನ್ನೈ ತಂಡ ಕಳಪೆಯಾಗಿ ಆಡೋದಿರಲಿ ಸಿಕ್ಕ ಅವಕಾಶಗಳನ್ನ ಕೂಡ ಚೆನ್ನಾಗಿ ಬಳಸಿಕೊಳ್ಳಲಿಲ್ಲ . ಎದುರಾಳಿಗಳು ಮಾಡಿದ ತಪ್ಪನ್ನ ಕೂಡ ಗುರುತಿಸದೇ ಚೆನ್ನೈ ಆಟಗಾರರು ಕುರುಡರಂತೆ ವರ್ತಿಸಿದ್ರು. ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ರಾಗಿ ಕಾರ್ಯ ನಿರ್ವಹಿಸಿದ ಅಂಬಟಿ ರಾಯ್ಡು ಹರ್ಭಜನ್ ಸಿಂಗ್ ಎಸೆತದಲ್ಲಿ ಬ್ಯಾಟ್ಸಮನ್ ಎವಿನ್ ಲಿವೀಸ್ ಕೊಟ್ಟ ಕ್ಯಾಚ್ವೊಂದನ್ನ ಅಂಪೈರ್ಗೆ ಮನವಿ ಮಾಡದೇ ಹಾಗೆ ಸುಮ್ಮನಾಗಿಬಿಟ್ಟಿದ್ದು ತಂಡದ ಸೋಲಿಗೆ ಕಾರಣವಾಯಿತು. ಹಿಡಿದ ಕ್ಯಾಚ್ನ್ನ ಅಂಪೈರ್ಗೆ ಮನವಿ ಮಾಡಿದ್ರೆ ಎವಿನ್ ಲಿವೀಸ್ 32 ರನ್ ಗಳಿಸುತ್ತಿರಲಿಲ್ಲ.

ಧೋನಿ ಇಲ್ಲದಿದ್ರೆ ಚೆನ್ನೈ ತಂಡವನ್ನ ಊಹಿಸಿಕೊಳ್ಳೋದು ಕಷ್ಟ
ಸೂಪರ್ ಕಿಂಗ್ಸ್ನ ಮೇನ್ ಸ್ಟ್ರೆಂಥ್ ಅಂದ್ರೆ ಅದು ಧೋನಿ, ನಾಯಕತ್ವ ಹಾಗು ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ಮೂಲಕ ಸಿಎಸ್ಕೆ ಗೆಲುವಿನಲ್ಲಿ ಧೋನಿ ಪ್ರಮುಖ ಪಾತ್ರವಹಿಸುತ್ತಾರೆ.ಒಂದೊಮ್ಮೆ ಬ್ಯಾಟಿಂಗ್ನಲ್ಲೂ ಧೋನಿ ಫೇಲ್ ಆದ್ರೂ, ತಮ್ಮ ಚಾಣಾಕ್ಷ ಕ್ಯಾಪ್ಟೆನ್ಸಿ ಮೂಲಕ ತಂಡಕ್ಕೆ ಜಯ ತಂದುಕೊಡ್ತಾರೆ.ಹೀಗಾಗಿ ಧೋನಿ ಇಲ್ಲದ ಸಿಎಸ್ಕೆನ ಊಹಿಸಿಕೊಳ್ಳೋದು ಕಷ್ಟ.

ಒಟ್ಟಿನಲ್ಲಿ ಧೋನಿ ಚೆನ್ನೈ ತಂಡದ ನಾವಿಕನಿದ್ದಂತೆ ಮಾಹಿಯ ಚಾಣಾಕ್ಷತನ ಬೇರೆ ಯಾವ ಆಟಗಾನಿಗೂ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ