ಅಂಬರೀಷ್ ಅವರನ್ನು ಮರೆಯೋಕೆ ಸಾಧ್ಯವಾಗುತ್ತಿಲ್ಲ-ಸುಮಲತಾ ಅಂಬರೀಶ್

ಬೆಂಗಳೂರು, ಏ.24- ಅಂಬರೀಷ್ ಅವರು ನಮ್ಮನ್ನಗಲಿ ಐದು ತಿಂಗಳು ಕಳೆದರೂ ಅವರನ್ನು ಮರೆಯೋಕೆ ಸಾಧ್ಯವಾಗುತ್ತಿಲ್ಲ ಎಂದು ಸುಮಲತಾ ಅಂಬರೀಷ್ ಭಾವುಕರಾಗಿ ನುಡಿದರು.

ಇಂದು ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಅವರ ಐದನೇ ತಿಂಗಳ ಪುಣ್ಯಸ್ಮರಣೆ ನಿಮಿತ್ತ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ ಸಮಾಧಿಗೆ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸುಮಲತಾ ಅಂಬರೀಷ್ ಅವರ ಪ್ರೀತಿ, ಮಾತು ನೆನಪುಗಳು ಸಾಕಷ್ಟಿವೆ. ಅವರು ನಮ್ಮನ್ನು ತೊರೆದು ಐದು ತಿಂಗಳು ಕಳೆದಿದೆ. ಆದರೂ ಸಹ ಅವರನ್ನು ಮರೆಯೋಕೆ ಸಾಧ್ಯವಾಗುತ್ತಿಲ್ಲ ಎಂದರು.

ಡಾ. ರಾಜ್‍ಕುಮಾರ್ ಮತ್ತು ಅಂಬರೀಷ್ ಇಬ್ಬರು ಒಟ್ಟಿಗೆ ಸೇರಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ್ದರು. ಇಂದು ರಾಜ್‍ಕುಮಾರ್ ಅವರ ಹುಟ್ಟು ಹಬ್ಬವಾಗಿದೆ. ಅಣ್ಣಾವ್ರ ಜತೆ ಅಂಬರೀಷ್ ಸದಾ ಹಾಸ್ಯ ಮಾಡುತ್ತಾ ಆತ್ಮೀಯರಾಗಿದ್ದರು ಎಂದು ಸ್ಮರಿಸಿದರು.

ಲೋಕಸಭಾ ಚುನಾವಣೆ ನಂತರ ಒಂದಷ್ಟು ತಿಳುವಳಿಕೆ ಬಂದಿದೆ. ಮೇ 23ರಂದು ಫಲಿತಾಂಶ ಹೊರಬೀಳಲಿದೆ. ಗೆಲುವಿನ ಬಗ್ಗೆ ಬೆಟ್ಟಿಂಗ್ ನಡೆಯುತ್ತಿರುವುದನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದರು.

ಅಂಬಿ ಸ್ಮಾರಕದ ಮೊದಲು ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಸ್ಮಾರಕಗಳನ್ನು ಪೂರ್ಣಗೊಳಿಸಬೇಕು ನಂತರ ಅಂಬಿ ಸ್ಮಾರಕವನ್ನು ಪೂರ್ಣಗೊಳಿಸಬೇಕು.

ಇದು ಕೇವಲ ನನ್ನ ಆಸೆ ಮಾತ್ರವಲ್ಲ ಇದು ಅಭಿಮಾನಿಗಳ ಆಸೆಯಾಗಿದೆ. ಅಂಬಿ ಇಲ್ಲದಿದ್ದರು ಅವರ ಮೇಲಿನ ಪ್ರೀತಿ ಜನರಲ್ಲಿ ಕುಂದಿಲ್ಲ ಎಂದರು.

ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯನಟ ದೊಡ್ಡಣ್ಣ ಸಮಾಧಿಗೆ ಪೂಜೆ ಸಲ್ಲಿಸಿದರು. ಅಂಬಿ ಅಭಿಮಾನಿಗಳು ಕೂಡ ಸಮಾಧಿಯ ಬಳಿ ಬಂದು ಪೂಜೆ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ