ಕುಂದಾನಗರಿಯಲ್ಲಿ ಮುಂದುವರೆದ ಐಟಿ ದಾಳಿ

ಬೆಳಗಾವಿ,ಏ.22- ಕುಂದಾ ನಗರಿಯಲ್ಲಿ ದಾಳಿ ಮುಂದುವರೆಸಿರುವ ಐಟಿ ಅಧಿಕಾರಿಗಳು ಕಾರಿನಲ್ಲಿ ಸಾಗಿಸುತ್ತಿದ್ದ 14 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ಐಟಿ ಅಧಿಕಾರಿಗಳು ಶ್ರೀಕಾಂತ್ ಮುನವಳ್ಳಿ ಅವರು ಸಂಚರಿಸುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ 14 ಲಕ್ಷ ರೂ.ನಗದು ಪತ್ತೆಯಾಗಿದೆ.

ಅದೇ ರೀತಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆಪ್ತರ ಮನೆಗಳ ಮೇಲೆ ದಾಳಿ ಮುಂದುವರೆಸಿ ಅಪಾರ ಪ್ರಮಾಣದ ಹಣ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಎನ್ನಲಾದ ಬೆಳಗಾವಿ ತಾಲೂಕು ಪಂಚಾಯತ್ ಸದಸ್ಯ ಶಂಕರಗೌಡ ಪಾಟೀಲ್ ಮನೆಯ ಮೇಲೆ ಹಾಗೂ ವಿರಕಣಕೊಪ್ಪ ಗ್ರಾಮದ ಫಾರ್ಮ್ ಹೌಸ್ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗೋವಾ ಹಾಗೂ ಬೆಳಗಾವಿ ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ.ಇದರ ಬೆನ್ನಲ್ಲೇ ಬೆಳಗಾವಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಸಂಬಂಧಿ ಮನೆ ಮೇಲೆ ಐಟಿ ದಾಳಿ ಆಗಿದೆ.ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಸುರೇಶ್ ಗೌಡ ಪಾಟೀಲ್ ಮನೆ ಮೇಲೆ ಐಟಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದು ಪರಿಶೀಲನೆ ವೇಳೆ 4.5ಲಕ್ಷ ನಗದು ಪತ್ತೆಯಾಗಿದೆ.ಸದರಿ ಹಣಕ್ಕೆ ಸುರೇಶ್‍ಗೌಡ ಪಾಟೀಲ್ ದಾಖಲೆ ತೋರಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ