ಲಂಕಾದಲ್ಲಿ ಬಾಂಬ್ ದಾಳಿ ಅತ್ಯಂತ ಹೇಯ ಕೃತ್ಯ-ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯಪುರ,ಏ.22- ನಿನ್ನೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ನಮ್ಮ ರಾಜ್ಯದ ಹಲವರು ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶ್ರೀಲಂಕಾ ರಾಯಭಾರಿ ಕಚೇರಿ ಜೊತೆ ಡಿಜಿಪಿ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ಬಾಂಬ್ ಸ್ಫೋಟದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದುರಂತ.ಇಂತಹ ಘಟನೆಗಳು ಯಾವುದೇ ದೇಶದಲ್ಲಿ ನಡೆಯಬಾರದು.ಈ ಘಟನೆಯನ್ನು ಇಡೀ ವಿಶ್ವವೇ ಖಂಡಿಸಿದೆ.ಕೊಲಂಬೋದಲ್ಲಿ ನಮ್ಮ ರಾಜ್ಯದ ಇಬ್ಬರು ಮೃತಪಟ್ಟಿರುವ ವಿಚಾರ ದೃಢಪಟ್ಟಿದೆ.

ಹನುಮಂತರಾಯಪ್ಪ, ರಂಗಪ್ಪ ಎಂಬುವವರು ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಇಲಾಖೆ ಖಚಿತ ಪಡಿಸಿದೆ ಇನ್ನೂ ಮೂವರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯಿದೆ. ಆದರೆ ನಿಖರವಾಗಿಲ್ಲ. ಪೊಲೀಸರು ಈ ಸಂಬಂಧ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ದಾಸರಹಳ್ಳಿಯ 7 ಜನ ನಾಪತ್ರೆಯಾಗಿದ್ದಾರೆ ಎಂಬ ಮಾಹಿತಿ ಇದೆ.ಆದರೆ ಯಾವುದರ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದರು.

ವಿದೇಶಾಂಗ ಇಲಾಖೆಯಿಂದ ಅಧಿಕೃತವಾಗಿ ಮಾಹಿತಿ ಬಂದ ಬಳಿಕವಷ್ಟೇ ನಿರ್ದಿಷ್ಟವಾಗಿ ಹೇಳಬಹುದು.

ಘಟನೆಯ ಬಗ್ಗೆ ನಿರ್ಧಿಷ್ಟವಾಗಿ ನಿಖರ ಮಾಹಿತಿ ಬಂದ ಬಳಿಕವಷ್ಟೇ ಮಾತನಾಡಿದರೆ ಒಳಿತು.

ಇದೊಂದು ಸೂಕ್ಷ್ಮ ವಿಚಾರವಾಗಿದೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ಪಡೆದು ಮಾಹಿತಿಯನ್ನು ನೀಡುತ್ತಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ