ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದ ಬಿಜೆಪಿ ರಾಷ್ಟಾಧ್ಯಕ್ಷರು

ಬೆಳಗಾವಿ, ಏ.17-ಸಾಂಗ್ಲಿ ಹೋಗುವ ಮಾರ್ಗವಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ, ಮುಂಬೈ ಕರ್ನಾಟಕದಲ್ಲಿ ಚುನಾವಣೆ ಸಿದ್ಧತೆ ಕುರಿತು ಸ್ಥಳೀಯ ಮುಖಂಡರಲ್ಲಿ ವಿಚಾರಿಸಿದರು.

ಈ ಭಾಗದ ಎಲ್ಲ ಏಳೂ ಕ್ಷೇತ್ರಗಳನ್ನು ಗೆಲ್ಲುವುದಾಗಿಯೂ, ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ವಿಧಾನಪರಿಷತ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ಮೊದಲಾದವರಿದ್ದರು.

ಜೈನ ಸಮುದಾಯದವರ ಭೇಟಿ:
ಬೆಳಗಾವಿಯಲ್ಲಿ ನಡೆಯುತ್ತಿರುವ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಭಾಕರ ಕೋರೆ ಅಮಿತ ಶಾ ಅವರಲ್ಲಿ ವಿನಂತಿಸಿದರು. ಆದರೆ ತಮಗೆ ಸಮಯಾಭಾವದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆದರೆ ವಾಪಸ್ ಬರುವ ಹೊತ್ತಿಗೆ, ಮಧ್ಯಾಹ್ನ 1.30ರ ವೇಳೆಗೆ ಜೈನ್ ಸಮುದಾಯದ ಮುಖಂಡರನ್ನು ವಿಮಾನ ನಿಲ್ದಾಣದಲ್ಲಿಯೇ ಭೇಟಿಯಾಗಿ ಶುಭಾಷಯ ಹೇಳುತ್ತೇನೆ ಎಂದು ಅಮಿತ ಶಾ ತಿಳಿಸಿದರು.

1.30ಕ್ಕೆ ವಿಮಾನ ನಿಲ್ದಾಣಕ್ಕೆ ಜೈನ್ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಾಸಕ ಅಭಯ ಪಾಟೀಲ ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ