ಈವರೆಗೂ ಪ್ರಚಾರಕ್ಕೆ ಬಾರದ ಮೂರು ಪಕ್ಷಗಳ ಪ್ರಮುಖ ಮುಖಂಡರು

ಬೆಂಗಳೂರು,ಏ.11- ಲೋಕಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಕೆಲವು ನಾಯಕರು ಮೌನಕ್ಕೆ ಶರಣಾಗಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

ಚುನಾವಣಾ ಪ್ರಕ್ರಿಯೆ ಆರಂಭವಾಗಿ ಹಲವು ದಿನಗಳು ಕಳೆದಿವೆ. ಸುಡುವ ಬಿಸಿಲನ್ನು ಲೆಕ್ಕಿಸದೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು, ಅಭ್ಯರ್ಥಿಗಳ ಕುಟುಂಬಸ್ಥರು ಸೇರಿದಂತೆ ಅನೇಕರು ಮತದಾರನ ಮನೆಬಾಗಿಲಿಗೆ ಎಡತಾಕುತ್ತಿದ್ದಾರೆ.

ಆದರೆ ಒಬ್ಬ ಅಭ್ಯರ್ಥಿಯ ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖರು ಈವರೆಗೂ ಪ್ರಚಾರಕ್ಕೂ ಬಾರದೆ ಚುನಾವಣೆಯಿಂದಲೆ ದೂರ ಉಳಿದಿರುವುದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.

ಇವರಲ್ಲಿ ಪ್ರಮುಖರೆಂದರೆ ಬೆಳಗಾವಿ ಜಿಲ್ಲೆಯ ಜಾರಕಿಹೊಳಿ ಸಹೋದರರ ಪೈಕಿ ಒಬ್ಬರಾದ ರಮೇಶ್ ಜಾರಕಿಹೊಳಿ, ಕತ್ತಿ ಸಹೋದರರಲ್ಲಿ ಉಮೇಶ್ ಕತ್ತಿ, ಬಳ್ಳಾರಿ ಜಿಲ್ಲೆಯ ಬಿ.ನಾಗೇಂದ್ರ, ಆನಂದ್‍ಸಿಂಗ್, ಬೆಂಗಳೂರಿನ ರೋಷನ್‍ಬೇಗ್, ಮಂಡ್ಯ ಜಿಲ್ಲೆಯ ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡೀ ಸಿದ್ದೇಗೌಡ ಸೇರಿದಂತೆ ಮೂರು ಪಕ್ಷಗಳ ಮುಖಂಡರು ಈವರೆಗೂ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿಲ್ಲ.

ಪಕ್ಷದೊಳಗಿನ ಆಂತರಿಕ ಕಚ್ಚಾಟ, ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿರುವುದು ಸೇರಿದಂತೆ ನಾನಾ ಕಾರಣಗಳಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರದಿಂದ ದೂರ ಉಳಿದಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ತಮ್ಮ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡಬೇಕೆಂದು ಉಮೇಶ್ ಕತ್ತಿ ಪಕ್ಷದ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ ಕೇಂದ್ರ ವರಿಷ್ಠರು ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಿರುವುದರಿಂದ ಮುನಿಸಿಕೊಂಡಿರುವ ಕತ್ತಿ ಸಹೋದರರು ಚುನಾವಣೆಗೆ ತಮಗೂ ಸಂಬಂಧವೇ ಇಲ್ಲ ಎಂದು ವರ್ತಿಸುತ್ತಿದ್ದಾರೆ.

ಇನ್ನು ಸಚಿವ ಸ್ಥಾನ ಕಳೆದುಕೊಂಡು ಪಕ್ಷದ ವಿರುದ್ಧ ಕತ್ತಿ ಮಸೆಯುತ್ತಲೇ ಇರುವ ರಮೇಶ್ ಜಾರಕಿಹೊಳಿ ನಡೆ ಕೂಡ ನಿಗೂಢವಾಗಿಯೇ ಇದೆ.ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಪರ ಒಂದೇ ಒಂದು ಬಾರಿಯೂ ಪ್ರಚಾರ ನಡೆಸಿಲ್ಲ.

ಅಲ್ಲದೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ಪ್ರಚಾರದಿಂದ ಹಿಂದೆ ಸರಿದಿರುವುದು ಸಂಶಯಗಳನ್ನು ಹುಟ್ಟುಹಾಕಿದೆ.

ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ದೋಸ್ತಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜಿಲ್ಲಾ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚಲುವರಾಯಸ್ವಾಮಿ ಈವರೆಗೂ ಪ್ರಚಾರಕ್ಕೆ ಧುಮುಕ್ಕಿಲ್ಲ. ಅವರನ್ನು ಅನೇಕ ಬಾರಿ ಕಾಂಗ್ರೆಸ್ ಮುಖಂಡರು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಸಂಧಾನ ಫಲ ನೀಡಿಲ್ಲ.

ಚಲುವರಾಯಸ್ವಾಮಿ ಜೊತೆಗೆ ಮಾಜಿ ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್‍ನ ಯಾವುದೇ ಮುಖಂಡರು ಭಾಗವಹಿಸಿಲ್ಲ.

ಗಣಿ ಜಿಲ್ಲೆ ಬಳ್ಳಾರಿಯಲ್ಲೂ ಇದೇ ಪರಿಸ್ಥಿತಿ ಇದೆ. ಕಾಂಗ್ರೆಸ್ ಶಾಸಕರಾದ ಬಿ.ನಾಗೇಂದ್ರ ದೂರವೇ ಉಳಿದಿದ್ದಾರೆ. ರೆಸಾರ್ಟ್‍ನಲ್ಲಿ ಹಲ್ಲೆಗೊಳಗಾಗಿದ್ದ ವಿಜಯನಗರ ಶಾಸಕ ಆನಂದಸಿಂಗ್, ಜೈಲು ಪಾಲಾಗಿರುವ ಜೆ.ಗಣೇಶ್, ಅಗರಿಬೊಮ್ಮನಹಳ್ಳಿಯ ಭೀಮನಾಯಕ್ ಸೇರಿದಂತೆ ಅನೇಕರು ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ.

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ರೋಷನ್ ಬೇಗ್ ನಾಯಕರ ವರ್ತನೆಯಿಂದ ಬೇಸತ್ತು ಆಟಕ್ಕುಂಟು ಲೆಕ್ಕ ಇಲ್ಲ ಎಂಬಂತೆ ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಎಂದು ಬಹಿರಂಗವಾಗಿಯೇ ಆರೋಪಿಸಿದ್ದರು. ಹೀಗೆ ಎಲ್ಲ ಪಕ್ಷಗಳಲ್ಲೂ ಶಾಸಕರು ಮುನಿಸಿಕೊಂಡು ಚುನಾವಣೆಯಿಂದ ದೂರ ಉಳಿದಿರುವುದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ