ಪತಿ ಗೆಲುವಿಗಾಗಿ ಪತ್ನಿ ಪಾದಯಾತ್ರೆ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಪತ್ನಿ ಡಾ. ಗೀತಾ ಖಂಡ್ರೆ ಮಂಗಳವಾರ ಔರಾದ್ ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಡಾ. ಗೀತಾ ಖಂಡ್ರೆ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಪತಿ ಗೆಲುವಿಗಾಗಿ ಪ್ರಾರ್ಥಿಸಿದರು. ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಪಾದಯಾತ್ರೆ ಮಾಡುವ ಮೂಲಕ ಪತಿ ಈಶ್ವರ ಖಂಡ್ರೆ ಪರವಾಗಿ ಮತಯಾಚನೆ ಮಾಡಿದ್ದಾರೆ.

ಖಂಡ್ರೆ ಅವರ ಕುಟುಂಬ ಔರಾದ್ ತಾಲೂಕಿನೊಂದಿಗೆ ಸಂಬಂಧ ಹೊಂದಿದೆ. ತಾಲೂಕಿನ ಜನಜೀವನ ಸುಧಾರಣೆ ಮತ್ತು ಕಷ್ಟ-ಸುಖದ ಬಗ್ಗೆ ಈಶ್ವರ ಖಂಡ್ರೆ ಕಾಳಜಿ ಹೊಂದಿದ್ದಾರೆ. ಖಂಡ್ರೆ ಅವರನ್ನು ನಿಮ್ಮ ಮನೆಯ ಮಗನೆಂದು ತಿಳಿದು ಆಶೀರ್ವಾದ ಮಾಡಬೇಕೆಂದು ಡಾ. ಗೀತಾ ಕೋರಿದರು.

ಈಶ್ವರ ಖಂಡ್ರೆಯವರು ಎಲ್ಲೇ ಇರಲಿ. ನಿಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸಲು ನಾನಿದ್ದೇನೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ನಾನು ಪರಿಹಾರ ಮಾಡುತ್ತೇನೆ. ನಿಮ್ಮ ಕಷ್ಟ-ಸುಖದ ಚಿಂತೆ ನನಗೆ ಬಿಟ್ಟು ಬಿಡಿ. ನಾನು ನಿಮ್ಮೊಂದಿಗಿದ್ದೇನೆ.  ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆಯವರನ್ನು ಗೆಲ್ಲಿಸಬೇಕು ಎಂದರು.

ತಾಲೂಕು ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬುರ್ಗೆ, ಮುಖಂಡರಾದ ವಿಜಯಕುಮಾರ್ ಕೌಡ್ಯಾಳ್, ಬಸವರಾಜ ದೇಶಮುಖ, ಪಪ್ಪು ಪಾಟೀಲ್ ಖಾನಾಪುರ, ರಾಮಣ್ಣ ಒಡೆಯರ್, ಬಾಬುರಾವ ತಾರೆ, ಡಾ. ಫಯಾಜ್ ಅಲಿ, ಡಾ. ಶಂಕರರಾವ ದೇಶಮುಖ, ಡಾ. ಮಹೇಶ ಫುಲಾರಿ, ಶರಣಪ್ಪ ಪಾಟೀಲ್, ವಿದ್ಯಾಸಾಗರ ಮಳ್ಳೆ, ರಾಜಕುಮಾರ ಎಡವೆ, ಸುನೀಲ ಮಿತ್ರಾ, ಸತೀಶ್ ನಿರ್ಮಳೆ, ವೈಜಿನಾಥ ಒಡೆಯರ್, ಚನ್ನಪ್ಪ ಉಪ್ಪೆ, ಮುಕ್ರಂ ಬಾಗವಾನ್, ಅಬ್ದುಲ್ ರಹೀಂಸಾಬ್ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ