ಲಾರಿ ಮತ್ತು ಮಿನಿ ಬಸ್ ನಡುವೆ ಡಿಕ್ಕಿ-ಘಟನೆಯಲ್ಲಿ ಮೂವರ ಸಾವು

ಹಾವೇರಿ,ಮಾ.28- ಉರುಸ್ ಕಾರ್ಯಕ್ರಮಕ್ಕೆ ತೆರಳಿ ಹಿಂತಿರುಗುವಾಗ ಮಿನಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಮೂವರು ಕಲಾವಿದರು ಧಾರುಣವಾಗಿ ಮೃತಪಟ್ಟಿರುವ ಘಟನೆ ಹಾವೇರಿ ಹೊರವಲಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಖಾದರ್ (45), ರಬ್ಬಾನಿ (50) ಹಾಗೂ ಶಬ್ಬೀರ್ (45) ಮೃತ ದುರ್ದೈವಿಗಳು.

ಈ ಮೂವರು ಹಾವೇರಿ ಜಿಲ್ಲೆಯ ಸವಣೂರಿನ ರಬ್ಬಾನಿ ಬ್ಯಾಂಡ್ ಕಂಪನಿಯ ಕಲಾವಿದರು ಎನ್ನಲಾಗಿದೆ.ಎಲ್ಲಾ ಕಲಾವಿದರು ಹಿರೇಕೆರೂರಿನಲ್ಲಿ ಉರುಸ್ ಕಾರ್ಯಕ್ರಮಕ್ಕೆ ತೆರಳಿದ್ದರು. ಉರುಸ್ ಕಾರ್ಯಕ್ರಮ ಮುಗಿಸಿ ಸವಣೂರಿಗೆ ವಾಪಸ್ ಬರುವಾಗ ಮಿನಿಬಸ್ ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ

ಅಪಘಾತದಲ್ಲಿ 16 ಜನರು ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಹಾವೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ವ್ಯಕ್ತಿಗಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.ಇನ್ನು ಆಸ್ಪತ್ರೆ ಎದುರು ಗಾಯಾಳುಗಳ ಕುಟುಂಬಸ್ಥರು, ಸಂಬಂಧಿಕರು ಆತಂಕದಿಂದ ಇದ್ದುದು ಕಂಡು ಬಂದಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ