ಮಹಿಳೆಯ ಗರ್ಭಕೋಶದ ಸುತ್ತಲೂ ಬೆಳೆದಿದ್ದ ಗೆಡ್ಡೆ-ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು

ಕೊರಟಗೆರೆ, ಮಾ.20-ಕಳೆದ ನಾಲ್ಕು ವರ್ಷದಿಂದ ಮಹಿಳೆಯ ಗರ್ಭಕೋಶದ ಸುತ್ತಲು ಬೆಳೆದಿದ್ದ 2ಕೆಜಿ 650ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ತೆಗೆಯುವಲ್ಲಿ ಯಶಸ್ವಿಯಾಗಿದೆ.

ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞಡಾ.ನಾಗಭೂಷಣ್, ಅರವಳಿಕೆ ತಜ್ಞ ಡಾ.ಪ್ರಕಾಶ್, ಆಸ್ಪತ್ರೆಯ ಸಿಬ್ಬಂದಿಗಳಾದ ಚಂದ್ರಕಲಾ, ಪ್ರೇಮಾ ಮತ್ತು ನಂಜೇಗೌಡ ನೇತೃತ್ವದ ವೈದ್ಯರ ತಂಡ ಕಮಲಮ್ಮ ಎಂಬ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ತುಂಬಾಡಿ ಗ್ರಾಪಂ ವ್ಯಾಪ್ತಿಯ ಪುಟ್ಟಮ್ಮನಪಾಳ್ಯ ಗ್ರಾಮದ ಕಮಲಮ್ಮ ಎಂಬ ಮಹಿಳೆಯ ಗರ್ಭಕೋಶ ಸುತ್ತಲೂ ಕಳೆದ ನಾಲ್ಕು ವರ್ಷದಿಂದ ಬೆಳೆದಿದ್ದ 2ಕೆಜಿ 650ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಪಟ್ಟಣದ ಸರಕಾರಿ ವೈದ್ಯರ ತಂಡ ಸುಸೂತ್ರವಾಗಿ ಶಸ್ತ್ರಚಿಕಿತ್ಸೆ ನಡೆಸಿ ತೆಗೆದಿದ್ದು, ಕಮಲಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಹದಿನೈದು ದಿನದ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಮಲಮ್ಮ, ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು.ವೈದ್ಯರು ಪರೀಕ್ಷೆ ನಡೆಸಿದಾಗ ಗೆಡ್ಡೆ ಇರುವುದು ಪತ್ತೆಯಾಗಿದೆ. ನಂತರ ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರ ತಂಡ ಸತತ 2ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ನಾಗಭೂಷಣ್ ಮಾತನಾಡಿ, ಮಹಿಳೆಗೆ ಹೃದಯ ಸಂಬಂಧ ಖಾಯಿಲೆಯ ನಡುವೆಯೂ ಗರ್ಭಕೋಶದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮಹಿಳೆಯ ಮಗನ ಒಪ್ಪಿಗೆಯ ಮೇರೆಗೆ ದೊಡ್ಡ ಗಾತ್ರಗೆಡ್ಡೆಯ ಶಸ್ತ್ರಚಿಕಿತ್ಸೆಯನ್ನು ಸರಕಾರಿಆಸ್ಪತ್ರೆಯಲ್ಲಿ ಮಾಡಿ ಯಶಸ್ವಿಯಾದ ಕೀರ್ತಿ ಅರವಳಿಕೆ ತಜ್ಞರಾದ ಡಾ.ಪ್ರಕಾಶ್ ಮತ್ತುಆಸ್ಪತ್ರೆಯ ಸಿಬ್ಬಂದಿಗಳಿಗೂ ಸಲ್ಲುತ್ತದೆ ಎಂದು ಹೇಳಿದರು.

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯ ಮಗ ಹರೀಶ್ ಪತ್ರಿಕೆಗೆ ಪ್ರತಿಕ್ರಯಿಸಿ, ಇಂದು ಶಸ್ತ್ರಚಿಕಿತ್ಸೆ ಮಾಡಿ 2ಕೆಜಿಗೂ ಅಧಿಕ ಗಾತ್ರಗೆಡ್ಡೆಯನ್ನು ಹೊಟ್ಟೆಯಿಂದ ಹೊರಗಡೆ ತೆಗೆದು ನನ್ನ ತಾಯಿಗೆ ದೇವರ ರೀತಿಯಲ್ಲಿ ವೈದ್ಯರ ತಂಡ ಮರುಜನ್ಮ ನೀಡಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ